Tuesday, November 17, 2009

ನೀರು ಗುಟುಕರಿಸುವ ಮುನ್ನ ತಿಳಿಯಿರಿ ಒಂದು ತೊಟಕು

ಮಣ್ಣು ಯಾರಿಗೆ ಗೊತ್ತಿಲ್ಲ ? ಹಾಗೆಯೇ ನೀರು, ಮಳೆ, ಮೋಡ, ಕಲ್ಲು ಇವೆಲ್ಲವೂ ಗೊತ್ತು. ಹಾಗಾದರೆ ಈಗ ಹೇಳಿ ಮಣ್ಣು ಅಂದರೇನು ? ಅಯ್ಯೋ...ಇದೊಳ್ಳೆ ಕತೆಯಾಯ್ತಲ್ಲಾ ? ಮಣ್ಣು ಅಂದರೆ ಮಣ್ಣು ಅನ್ನಬಹುದು. ಹಾಗಂದರೇನು ಅಂತ ಹೇಳುವುದು ಕಷ್ಟ. ಬೇಕಿದ್ದರೆ ಇದು ಅಂತ ತೋರಿಸಬಹುದಪ್ಪಾ....ಹಾಗೆಯೇ ಇತರ ವಿಷಯಗಳ ಬಗೆಗೂ ಸಹ. ಅಂಥ ನೀರು, ಮಣ್ಣು ಇತ್ಯಾದಿಗಳಲ್ಲಿ ಹಲವು ಬಗೆಗಳೂ ಉಂಟು. ಬಹುತೇಕ ಸಂದರ್ಭದಲ್ಲಿ ನಮಗೆ ಈ ವ್ಯತ್ಯಾಸಗಳು ಗೊತ್ತೇ ಆಗಿರುವುದಿಲ್ಲ. ಆದರೆ ನೀರಿನ ಬಗೆಗೆ ತಿಳಿದುಕೊಳ್ಳುವ ಮುನ್ನ ಇಂಥ ವ್ಯತ್ಯಾಸಗಳನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ.

ಬೇಕಿದ್ದರೆ ನೋಡಿ, ಜೀವನ ಎಂಬುದರ ಬಗ್ಗೆ ತಿಳಿಯುವಾಗ ಬದುಕಿಗೆ ಸಂಬಂಸಿ ಹಲವು ಸಂಗತಿಗಳನ್ನು ಅರಿಯಲೇಬೇಕಾಗುತ್ತದೆ. ಹಾಗೆಯೇ ನೀರು. ಅದು ಜೀವನದ ಮೂಲದ್ರವ್ಯ. ಜೀವನದ ಚೈತನ್ಯಾಧಾರ. ಹೀಗಾಗಿ ಜೀವನದ ಅರಿವಿಗೆ ನೀರಿನ, ಅದಕ್ಕೆ ಸಂಬಂಸಿದ ಹಲವು ಸಂಗತಿಗಳನ್ನು ನಾವು ಅರಿತುಕೊಳ್ಳುವುದು ಪ್ರಾಥಮಿಕ ಅಗತ್ಯವಾಗುವುದಿಲ್ಲವೇ ?


ನೀರಿನ ಬಗ್ಗೆ ಮಾತನಾಡುವಾಗ, ಅದರ ಕುರಿತ ಬರಹಗಳನ್ನು ಓದುವಾಗ, ತಜ್ಞರ ಮಾತುಗಳನ್ನು ಆಲಿಸುವಾಗ-ಹಲವು ಸಂದರ್ಭಗಳಲ್ಲಿ ಅನೇಕ ಪದಗಳು ಬಳಕೆಯಾಗುತ್ತಲೇ ಇರುತ್ತವೆ. ಅನೇಕ ಬಾರಿ ಅವುಗಳ ಸರಿಯಾದ ಅರ್ಥವೇ ನಮಗೆ ತಿಳಿದಿರುವುದಿಲ್ಲ. ಆದರೆ ಇವುಗಳಿಲ್ಲದೆ ನೀರಿನ ವಿಚಾರ ಮಾತನಾಡಲೂ ಆಗುವುದಿಲ್ಲ. ನೀರಿನ ಬಗೆಗೆ ತಿಳಿದುಕೊಳ್ಳುವ ಮೊದಲು ಅಂಥ ಹಲವು ನಿತ್ಯಬಳಕೆಯ ಹಾಗೂ ಪಾರಿಭಾಷಿಕ ಪದಗಳ ಕುರಿತು ಒಂದಷ್ಟು ಹೇಳುವ ಪ್ರಯತ್ನ ಈ ವಾರದ ಅಂಕಣದಲ್ಲಿದೆ.


ಮೇಲ್ಮಣ್ಣು: ಹೆಸರೇ ಸೂಚಿಸುತ್ತದೆ. ಮೇಲೆ ಇರುವ ಮಣ್ಣು. ಆದರೆ ಎಷ್ಟು ಮೇಲೆ ಎಂಬುದು ಪ್ರಶ್ನೆ. ಮಣ್ಣಿನ ಮೇಲು ಬದಿಯ ೧.೫ ಮೀಟರ್‌ನ ಪದರ. ಇದು ಹಳ್ಳಿ, ಕೃಷಿ ಜಮೀನುಗಳಲ್ಲಿ ಸರಿ. ಆದರೆ ನಗರಗಳ ವಿಚಾರಕ್ಕೆ ಬಂದಾಗ ಸರಿಹೊಂದದು. ನಗರಗಳಲ್ಲಿ ಕಟ್ಟಡ ನಿರ್ಮಾಣದ ಸಂದರ್ಭ ಸುತ್ತಮುತ್ತಲಿನ ಜಮೀನಿನ ಮೇಲ್ಮೈ ಮಣ್ಣು ಅವುಗಳ ಅವಶೇಷಗಳಿಂದ ತುಂಬಿರುತ್ತದೆ. ಹೀಗಾಗಿ ಇಲ್ಲಿ ಮೇಲ್ಮಣ್ಣನ್ನು ಗುರುತಿಸುವುದು ಕಷ್ಟ.


ಕೆಳ ಮಣ್ಣು: ನೆಲಮಟ್ಟಕ್ಕಿಂತ ೧.೫ ಮೀಟರ್ ನಂತರದ ಮಣ್ಣು. ಅದೇನೋ ಸರಿ ಇದನ್ನು ಗುರುತಿಸುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮರಳು, ಜೇಡಿ, ಆವೆ, ಸಣ್ಣಕಲ್ಲುಗಳು ಅಥವಾ ಬಂಡೆ ಇತ್ಯಾದಿಗಳ ಶೇಕಡಾವಾರು ಪ್ರಮಾಣಕ್ಕನುಸರಿಸಿ ಕೆಳಮಣ್ಣಿನ ರಚನೆ, ವೈವಿಧ್ಯ, ಗುಣವಿಂಗಡಣೆ ಸಾಧ್ಯ. ಸಾಮಾನ್ಯವಾಗಿ ಸ್ಥಳದಲ್ಲಿ ಕಟ್ಟಡ ನಿರ್ಮಿಸುವ ಮುನ್ನ, ಯಾವ ಬಗೆಯ ತಳಪಾಯ ಹಾಕಬೇಕು ಎಂಬುದನ್ನು ನಿರ್ಧರಿಸಲು ಈ ಪರೀಕ್ಷೆಯನ್ನು ೭ರಿಂದ ೧೦ ಮೀಟರ್ ಕೆಳಗಿನ ಮಣ್ಣಿನವರೆಗೂ ಮಾಡಲಾಗುತ್ತದೆ.


ಮೇಲ್ಮೈ ಜಲ: ಕೆಳಮಣ್ಣಿನಲ್ಲಿ ಉಂಟಾಗುವ ರಂಧ್ರಗಳಲ್ಲಿ ಶೇಖರವಾಗುವ, ಇನ್ನಷ್ಟು ತಳದವರೆಗೆ ಇಳಿಯಬಲ್ಲ, ಮೇಲ್ಮೈ ಹಂತದವರೆಗೆ ಒಸರುವ ನೀರು. ಇದನ್ನು ಬಾವಿ ಅಥವಾ ಬೋರ್‌ವೆಲ್‌ಗಳ ಮೂಲಕ ಸಂಗ್ರಹಿಸಬಹುದು.


ಜಲಜಶಿಲೆ: ಮೇಲ್ಮೈ ಮಣ್ಣಿಗಿಂತ ಕೆಳಗಿರುವ, ನೀರನ್ನು ತನ್ನಲ್ಲಿ ಹಿಡಿದಿಟ್ಟುಕೊಳ್ಳುವ ಹಾಗೂ ನೀರಿನ ಸಂಚಾರಕ್ಕೆ ಹಾದಿ ಮಾಡಿಕೊಡುವ, ಹಾಗಾಗಿಯೇ ನೀರಿನ ಮೂಲ ಎನಿಸಿಕೊಂಡಿರುವ ಮಣ್ಣು ಅಥವಾ ಬಂಡೆಯ ಪದರ.


ಮೇಲ್ಮೈ ಜಲ ಮಟ್ಟ: ಕೆಳ ಮಣ್ಣಿನ ಮೇಲುಭಾಗದಲ್ಲಿರುವ ನೀರಿನ ಮಟ್ಟ. ಇದು ಒಂದು ಪ್ರದೇಶದಲ್ಲಿ ಎಲ್ಲ ಕಡೆಗೂ ಸಮಾನವಾಗಿರಬೇಕೆಂದೇನಿಲ್ಲ. ಕೆಳಮಣ್ಣಿನ ಗುಣಧರ್ಮ ಹಾಗೂ ನೀರಿನ ಬಳಕೆಯ ಪ್ರಮಾಣಕ್ಕನುಸರಿಸಿ ಇದು ಏರುಪೇರಾಗಬಹುದು.


ಬಾವಿ: ಮೇಲ್ಮೈ ಜಲ ಮಟ್ಟ ದೊರೆಯುವವರೆಗೆ ತೋಡಲಾದ ಗುಂಡಿ. ಮರಳು ಅಥವಾ ಜೇಡಿ ಮಣ್ಣಿನಲ್ಲಾದರೆ, ತೋಡಿದ ಬಾವಿಯ ಬದಿ ಕುಸಿಯದಂತೆ ಇಟ್ಟಿಗೆ ಅಥವಾ ಕಾಂಕ್ರೀಟ್‌ನ ರಿಂಗ್ ನಿರ್ಮಿಸುವುದು ಅಗತ್ಯ. ಕಲ್ಲು ಬಂಡೆ ಇದ್ದರೆ ಅಂಥ ರಿಂಗ್ ಅನಗತ್ಯ. ಸಾಮಾನ್ಯವಾಗಿ ಈ ಗುಂಡಿ ವೃತ್ತಾಕಾರದಲ್ಲಿದ್ದು, ೩ರಿಂದ ೧೨ ಅಡಿ ತ್ರಿಜ್ಯ ಹೊಂದಿರುತ್ತದೆ ಹಾಗೂ ೪೫ ಅಡಿಗಿಂತ ಆಳವಾಗಿರುವುದಿಲ್ಲ.


ಸಾಮಾನ್ಯವಾಗಿ, ಬಾವಿಯ ನೀರಿನ ಗುಣಮಟ್ಟ ಬೋರ್‌ವೆಲ್ ನೀರಿಗಿಂತ ಉತ್ತಮವಾಗಿರುತ್ತದೆ. ಆದರೆ ಕೆಲವೆಡೆ, ಬಂಡೆಗಳಿರುವ ಪ್ರದೇಶದಲ್ಲಿ ಬೋರ್‌ವೆಲ್ ನೀರು ಬಾವಿಯದಕ್ಕಿಂತ ಚೆನ್ನಾಗಿರುತ್ತದೆ. ಇದಕ್ಕೆ ‘ತೆರೆದ ಬಾವಿ’ ಅಂತ ಯಾಕೆನ್ನುತ್ತಾರೆ ಅಂದರೆ, ಪಂಪ್ ತಂತ್ರಜ್ಞಾನ ಆವಿಷ್ಕಾರವಾಗುವ ಮೊದಲು ರಾಟೆ-ಹಗ್ಗ ಬಳಸಿ ಬಾವಿಯಿಂದ ನೀರೆತ್ತುತ್ತಿದ್ದರು. ಕೆಲವೆಡೆ ಬಾವಿಯ ಬದಿಯಲ್ಲಿ ಸಣ್ಣ ಮೆಟ್ಟಲು ಅಳವಡಿಸಿ ಕೆಳಗಿಳಿದು ನೀರು ಹೊರುವುದೂ ಇತ್ತು. ಇಂದು ಎಲ್ಲ ಕಡೆ ಪಂಪ್ ಇರುವುದರಿಂದ, ಬಾವಿಗಳನ್ನು ತೆರೆದೇ ಇರಬೇಕಾದ ಅಗತ್ಯವೇನೂ ಇಲ್ಲ. ಇಂದು ಮನುಷ್ಯರ ಹಾಗೂ ವಾಹನಗಳ ಓಡಾಟಕ್ಕೆ ಭಂಗ ಬಾರದಂತೆ ಅವುಗಳ ಮೇಲೆ ಗಟ್ಟಿಯಾದ ಕವರ್ ಹೊದಿಸಬಹುದು.


ಕೊಳವೆ ಬಾವಿ: ಸಾಮಾನ್ಯವಾಗಿ ಬಾವಿಗಳಿಗಿಂತ ಹೆಚ್ಚು ಆಳಕ್ಕೆ ಮಣ್ಣಿನಲ್ಲಿ ಕೊರೆದಿರುವ, ೫ರಿಂದ ೧೦ ಇಂಚು ತ್ರಿಜ್ಯವಿರುವ ವೃತ್ತಾ ಕಾರದ ರಂಧ್ರ. ಇದು ಮಣ್ಣಿನ ನಾನಾ ಪದರಗಳಿಂದ ನೀರನ್ನು ಸಂಗ್ರಹಿಸಬಲ್ಲದು. ಸಾಮಾನ್ಯ ಮಣ್ಣಿನಲ್ಲಿ ಇವನ್ನು ರಿಗ್ ಬಳಸಿ, ಬಂಡೆಮಣ್ಣಿನಲ್ಲಿ ನ್ಯೂಮಾಟಿಕ್ ರಿಗ್ ಬಳಸಿ ಕೊರೆಯಲಾಗುತ್ತದೆ. ರಂಧ್ರದೊಳಗೆ ಮಣ್ಣು ಕುಸಿಯದಂತೆ ಪಿವಿಸಿ ಕೇಸಿಂಗ್ ಪೈಪ್ ಇಳಿಸಲಾಗುತ್ತದೆ. ಬಂಡೆಮಣ್ಣಿನಲ್ಲಿ ಕೇಸಿಂಗ್ ಅಗತ್ಯವಿಲ್ಲ. ನಾನಾ ಪದರಗಳಿಗೆ ತಕ್ಕಂತೆ ಈ ಕೇಸಿಂಗ್ ಪೈಪಿನಲ್ಲಿ ತೂತುಗಳಿರುತ್ತವೆ. ಹಿಂದೆ ಕಬ್ಬಿಣದ ಕೇಸಿಂಗ್ ಪೈಪ್‌ಗಳನ್ನು ಬಳಸಲಾಗುತ್ತಿತ್ತು.


ಟ್ಯೂಬ್‌ವೆಲ್: ಇದು ಕೂಡ ಬೋರ್‌ವೆಲ್. ಆದರೆ ಹೆಚ್ಚು ಆಳವಾಗಿರುವುದಿಲ್ಲ.


ಬಳಕೆ ಬಾವಿ/ಬಳಕೆ ಬೋರ್‌ವೆಲ್: ನೀರನ್ನು ಬಳಕೆಗೆ ಪಡೆಯಲಾಗುತ್ತಿರುವ ಬಾವಿ ಅಥವಾ ಕೊಳವೆಬಾವಿ.


ಮರುಪೂರಣ ಬಾವಿ: ಜಲ ಮಟ್ಟ ಬಾವಿಯ ತಳಕ್ಕಿಂತಲೂ ಇಳಿದುಹೋಗಿರುವುದರಿಂದ ನೀರು ಖಾಲಿಯಾಗಿ, ಬಳಕೆಗೆ ಉಪಯೋಗವಾಗದ ಬಾವಿ. ಹೀಗಾಗಿ ಇದರಲ್ಲಿ ಮಳೆ ನೀರು ಮಾತ್ರ ನಿಲ್ಲುತ್ತದೆ. ಕೆಲ ಕಾಲಾನಂತರ, ಜಲಮಟ್ಟ ಏರಿದಾಗ ಈ ಬಾವಿ ಬಳಕೆಯೋಗ್ಯವಾಗಬಹುದು.


ಇಂಗು ಗುಂಡಿ: ಮಳೆ ನೀರನ್ನು ಇಂಗಿಸಲು ಅನುಕೂಲ ಹಾಗೂ ಅಗತ್ಯಕ್ಕೆ ತಕ್ಕಷ್ಟು ಆಳಕ್ಕೆ ಹಾಗೂ ಅಗಲಕ್ಕೆ ಮಣ್ಣಿನಲ್ಲಿ ಕೊರೆದಿರುವ ಗುಂಡಿ. ಮಳೆ ನೀರು ಇಲ್ಲಿ ಸಂಗ್ರಹಗೊಂಡು, ನಿಂತು, ಇಂಗಿ ಜಲ ಮಟ್ಟವನ್ನು ತಲುಪುತ್ತದೆ. ಬಾವಿಗಿದ್ದಂತೆ ಇದಕ್ಕೂ ಇಟ್ಟಿಗೆ ಅಥವಾ ಕಾಂಕ್ರೀಟಿನ ಲೈನಿಂಗ್ ಇರಬಹುದು. ಅಗತ್ಯಬಿದ್ದಾಗ ಇದನ್ನೇ ಆಳಕ್ಕೆ ತೋಡಿ, ಬಾವಿಯಂತೆಯೂ ಬಳಸಲು ಸಾಧ್ಯ.


ಮರುಪೂರಣ ಕೊಳವೆ ಬಾವಿ: ಸಮರ್ಪಕವಾಗಿ ನಿರ್ಮಿಸಲಾದ ಕೊಳವೆ ಬಾವಿ- ಇದರ ಮುಖ್ಯ ಉದ್ದೇಶ ಕೆಳಮಣ್ಣಿಗೆ ಮಳೆ ನೀರನ್ನು ತಲುಪಿಸುವುದು. ಮರುಪೂರಣ ಬಾವಿಯಂತೆ ಇದು ಕೂಡ ಜಲ ಮಟ್ಟವನ್ನು ಮುಟ್ಟಿರಬಹುದು ಅಥವಾ, ಅದಕ್ಕೆ ನೀರೂಡಿಸಲು ಅಗತ್ಯವಾದ ಪದರದ ತನಕ ಇರಬಹುದು. ಕೆಲ ಕಾಲದ ಬಳಿಕ, ಜಲಮಟ್ಟವು ಇದರ ತಳಭಾಗವನ್ನು ದಾಟಿ ಮೇಲೆ ಬಂದರೆ ಆಗ ಇದನ್ನು ಬಳಕೆಯೋಗ್ಯವಾಗಿ ಮಾಡಬಹುದು.


ಇಂಗು ರಂಧ್ರ: ನೀರನ್ನು ಹೀರಿಕೊಳ್ಳಲು ಅಗತ್ಯವಾದಷ್ಟು ಆಳಕ್ಕೆ ಮಣ್ಣಿನಲ್ಲಿ ಕೊರೆಯಲಾದ ೫ರಿಂದ ೧೦ ಇಂಚು ತ್ರಿಜ್ಯವುಳ್ಳ ರಂಧ್ರ. ಚಿಕ್ಕ ಕಲ್ಲುಗಳು ಹಾಗೂ ಇದ್ದಲನ್ನು ಇದರಲ್ಲಿ ತುಂಬಿಸಲಾಗುತ್ತದೆ. ಇದರೊಳಗೆ ನೀರು ಕಲ್ಲು ಹಾಗೂ ಇದ್ದಿಲಿನ ನಡುವೆ ಹರಿದು ಇಂಗುತ್ತದೆ. ಕಲ್ಲುಗಳ ಬದಲು ರಂಧ್ರಗಳುಳ್ಳ ಪಿವಿಸಿ ಪೈಪನ್ನೂ ಬಳಸಬಹುದು. ರಂಧ್ರದ ಬಾಯಿ ೨-೩ ಅಡಿಯಷ್ಟು ಅಗಲವಿದ್ದಾಗ, ಶುದ್ಧ ಮರಳು ಹಾಕಿ ಮುಚ್ಚಬಹುದು.


ರೋಗ ಜೀವಾಣು: ಕೆಲ ನಮೂನೆಯ ಬ್ಯಾಕ್ಟೀರಿಯಾಗಳು ಹಾಗೂ ವೈರಸ್‌ಗಳು ಕುಡಿಯುವ ನೀರು ಶುದ್ಧವಾಗಿಲ್ಲದಿದ್ದಾಗ ಅವುಗಳ ಮೂಲಕ ಮಾನವನ ಜೀರ್ಣಾಂಗ ವ್ಯವಸ್ಥೆಯೊಳಗೆ ಪ್ರವೇಶಿಸಿ ರೋಗವನ್ನುಂಟುಮಾಡಬಲ್ಲವು. ಉದಾಹರಣೆಗೆ: ಕಾಲರಾ, ವಾಂತಿ ಭೇದಿ, ಟೈಫಾಯಿಡ್, ಜಾಂಡೀಸ್ ಇತ್ಯಾದಿ.


ಸೀವೇಜ್ (ಕಪ್ಪು ನೀರು): ನಮ್ಮ ಶೌಚಾಲಯಗಳಿಂದ ಕಲ್ಮಶಸಹಿತ ಹರಿಯುವ ನೀರು.


ಸಲ್ಲೇಜ್ (ಬೂದು ನೀರು): ನಾವು ಸ್ನಾನಕ್ಕೆ, ಬಟ್ಟೆ-ಪಾತ್ರೆ-ವಾಹನ- ನೆಲ ತೊಳೆಯಲು ಬಳಸಿದ ನೀರು. ಈ ನೀರು, ಸೀವೇಜ್‌ನಷ್ಟು ಹಾನಿಕಾರಕ ರೋಗ ಜೀವಾಣುಗಳನ್ನು ಹೊಂದಿರುವುದಿಲ್ಲ. ಆದ್ದರಿಂದ ಇದನ್ನು ಸಂಸ್ಕರಿಸುವುದು ಸುಲಭ.


ಸೀವರೇಜ್: ಇದು ಬಳಸಿದ ನೀರನ್ನು (ಸಾಮಾನ್ಯವಾಗಿ ಸೀವೇಜ್) ಸಂಸ್ಕರಣಾ ಘಟಕಕ್ಕೆ ಕೊಂಡೊಯ್ಯುವ, ಮನೆ-ರಸ್ತೆ-ಬೀದಿಯಲ್ಲಿ ಹಬ್ಬಿರುವ ಭೂಗತ ಪೈಪ್‌ಗಳ ಜಾಲ. ಇದು ಪಂಪಿಂಗ್ ಸ್ಟೇಶನ್‌ಗೆ, ಅಲ್ಲಿಂದ ಸೀವೇಜ್ ಸಂಸ್ಕರಣಾ ಘಟಕಕ್ಕೆ ಹರಿದು ನಂತರ ಸುರಕ್ಷಿತವಾಗಿ ಹರಿಯಬಿಡಲಾಗುತ್ತದೆ. ಇಂದು ಸಲ್ಲೇಜ್ ಕೂಡ ಸೀವೇಜ್ ಜತೆಗೆ ಸೇರಿಕೊಳ್ಳುತ್ತದೆ.


ಸವಳು ನೀರು: ಕುಡಿಯಲು ಬೇಕಾದ ಗುಣಮಟ್ಟಕ್ಕಿಂತ ಹೆಚ್ಚು ಪ್ರಮಾಣದ ಲವಣಾಂಶ ಕರಗಿರುವ ನೀರು. ತುಸು ಶುದ್ಧೀಕರಿಸಿದರೆ ಇದನ್ನು ಕುಡಿಯಲು, ಅಡುಗೆ ಮಾಡಲು ಬಳಸಬಹುದು.


ಸಲೈನ್ ವಾಟರ್: ಇದು ಸವಳು ನೀರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಲವಣಾಂಶ ಬೆರೆತಿರುವ ನೀರು. ಇದನ್ನು ಕುಡಿಯುವುದು, ಬಟ್ಟೆ ತೊಳೆಯುವುದು, ಅಡುಗೆ ಮಾಡುವುದು ಸಾಧ್ಯವಿಲ್ಲ.

‘ಲಾಸ್ಟ್’ಡ್ರಾಪ್: ನೀರು ಅಷ್ಟು ಸುಲಭದಲ್ಲಿ ಅರ್ಥವಾಗುವ ಸಂಗತಿಯಲ್ಲ. ಹೇಳಿ ಕೇಳಿ ಅದು ನೀರು. ಈವರೆಗೆ ಅದರ ಆಳ-ವಿಸ್ತಾರ ಗಳನ್ನು ಪೂರ್ತಿ ಅರಿತವರಿಲ್ಲ. ಒಂದಷ್ಟು ಹನಿಗಳನ್ನು ಗುಟುಕರಿಸಬಹುದಷ್ಟೇ.

ಕುಡಿಯೋ ನೀರಿಗಿನ್ನು ಕಾಸು ಕೊಡೋದು ಅನಿವಾರ್ಯ

ಆಂದ್ರ ಪ್ರದೇಶದ ಹಳ್ಳಿ ಜನತೆ ಇನ್ನು ಮುಂದೆ ಬಾಯಾರಿದಾಗ ಎಲ್ಲಿ ಬೇಕಾದರೂ ಪುಗಸಟ್ಟೆ ನೀರು ಕುಡಿಯುವಂತಿಲ್ಲ. ಲೀಟರ್‌ಗೆ ೧೦ ಪೈಸೆಯಂತೆ ಪಾವತಿಸಬೇಕು. ಅದೇನು ಮಹಾ, ನಾವು ಲೀಟರ್‌ಗೆ ೧೦ ರೂಪಾಯಿ ಕೊಟ್ಟು ಬಿಸ್ಲೇರಿ ನೀರು ಕುಡಿಯುತ್ತಿಲ್ಲವೆ ? ಎಂದು ಕೆಲವರು ಕೇಳಬಹುದು. ಅದರೆ ಹಾಗಲ್ಲ ಇದು. ಖಾಸಗಿ ಕಂಪನಿಗಳು ಗ್ರಾಮೀಣ ಜಲಮೂಲಗಳಿಂದಲೇ ಎತ್ತಿದ ಕಚ್ಚಾ ನೀರನ್ನು ಶುದ್ಧೀಕರಿಸಿ(?) ಕ್ಯಾನುಗಳಲ್ಲಿ ತುಂಬಿ ಜನರಿಗೆ ಮಾರುತ್ತವೆ. ಈಗಾಗಲೇ ಇಂಥ ಐದು ಕಂಪೆನಿಗಳ ಹೆಸರನ್ನು ಆಂಧ್ರ ಸರಕಾರ ಪಟ್ಟಿ ಮಾಡಿದೆ. ತಮ್ಮೂರಿನ ಜಲವನ್ನೇ ೨೦ ಲೀಟರ್‌ನ ಕ್ಯಾನ್‌ಗೆ ೧೦ ರೂಪಾಯಿಯಂತೆ ತೆತ್ತು ಕೊಂಡುಕೊಳ್ಳುವ ಹಣೆಬರಹ ಜನರದು.

ದೇಶದ ನಗರಗಳು ದಿನದಿಂದ ದಿನಕ್ಕೆ ಬೆಳೆಯುತ್ತಿದೆ, ಸಹಜವಾಗಿ ಅಲ್ಲಿನ ನೀರಿನ ಬೇಡಿಕೆ ಸಹ. ಇದನ್ನು ಪೂರೈಸಲು ನಾವು ಅದೆಷ್ಟೇ ಖರ್ಚಾಗಲಿ, ಅದೆಷ್ಟು ದೂರದಿಂದಲೇ ಆಗಲಿ ನೀರು ತಂದೇ ತರುತ್ತೇವೆಂಬ ಪಣ ತೊಟ್ಟು ಬಿಟ್ಟಿದ್ದೇವೆ. ಹೀಗಾಗಿಯೇ ಬೆಂಗಳೂರಿಗೆ ನಾವು ಸುಮಾರು ೧೦೦ ಕಿ.ಮೀ.ಗಿಂತಲೂ ದೂರದಿಂದ ಕಾವೇರಿಯನ್ನು ಎಳೆದು ತರುತ್ತಿದ್ದೇವೆ. ದಿಲ್ಲಿಗೆ ನೀರು ಪೂರೈಕೆಯಾಗುತ್ತಿರುವುದು ೩೦೦ ಕಿ.ಮೀ. ದೂರದ, ಹಿಮಾಲಯದ ತಪ್ಪಲಿನ ತೆಹ್ರಿ ಅಣೆಕಟ್ಟೆಯಿಂದ. ಹೈದರಾಬಾದ್‌ಗೆ ೧೦೫ ಕಿ.ಮೀ. ದೂರವಿರುವ, ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ನಾಗಾರ್ಜುನ ಸಾಗರ ದಿಂದ. ಉದಯಪುರಕ್ಕೆ ಜೈಸಮಂದ್ ಸರೋವರದಿಂದ ಪೂರೈಸಲಾಗುತ್ತಿತ್ತಾದರೂ ಅದೀಗ ಬತ್ತಿಹೋಗಿದೆ.


ವಿಚಿತ್ರವೆಂದರೆ ನಗರ ಪ್ರದೇಶದ ಬಡವರ್ಗದವರು ಕಡಿಮೆ ನೀರನ್ನು ಪಡೆಯುತ್ತಿದ್ದರೂ ಅದಕ್ಕಾಗಿ ಹೆಚ್ಚಿನ ಹಣ ತೆರುತ್ತಿದ್ದಾರೆ. ಅತಿ ಹೆಚ್ಚು ಬಳಕೆ ಮಾಡುತ್ತಿರುವ ಶ್ರೀಮಂತ ವರ್ಗದ ಮಂದಿ ಅತಿ ಕಡಿಮೆ ಬೆಲೆಯಲ್ಲಿ ನೀರು ಪಡೆಯುತ್ತಿದ್ದಾರೆ. ಬೆಂಗಳೂರಿನ ನಿವಾಸಿಗಳ ಪೈಕಿ ಶೇ. ೨೦ರಷ್ಟಿರುವ ಶ್ರೀಮಂತರು ನೀರಿನ ಶುಲ್ಕದಲ್ಲಿ ಹೆಚ್ಚಿನ ಸಬ್ಸಿಡಿ (ಶೇ. ೩೦ರಷ್ಟು )ಯ ಫಲಾನುಭವಿಗಳು. ಆದರೆ ಶೇ. ೫೦ರಷ್ಟಿರುವ ಬಡವರ್ಗದ ಮಂದಿಗೆ ನೀರಿನ ಶುಲ್ಕದಲ್ಲಿ ಶೇ. ೧೦ರಷ್ಟು ಮಾತ್ರ ಸಹಾಯಧನ ದೊರೆಯುತ್ತಿದೆ.
ಹಣವಂತರನ್ನೇ ಮಾನದಂಡವಾಗಿಟ್ಟುಕೊಂಡು ಸಂಪನ್ಮೂಲ ಹಂಚಿಕೆ ಮಾಡುವ ನಮ್ಮ ಪ್ರವೃತ್ತಿ ಖಂಡಿತಾ ಅಪಾಯಕಾರಿ. ನೀವು ಬೇಕಿದ್ದರೆ ನೋಡಿ, ಹಣಕೊಟ್ಟರೆ ಎಷ್ಟು ಬೇಕಾದರೂ ನೀರು ಬಳಸಬಹುದು, ಅದಿಲ್ಲದಿದ್ದರೆ ನೀರು ಸಿಗದು ಎಂಬ ಸ್ಥಿತಿ ನಗರಗಳಲ್ಲಿದೆ. ನಮ್ಮ ಇಂಥ ಸಂಪನ್ಮೂಲ ಹಂಚಿಕೆ ನೀತಿ ಕೂಡ ರಾಜತಾಂತ್ರಿಕ ಹುನ್ನಾರದ ಭಾಗವೇ. ಅಮೆರಿಕ ಅದರ ಸೂತ್ರಧಾರ. ಹೀಗಾಗಿ, ವಿಶ್ವಬ್ಯಾಂಕ್, ವಿಶ್ವವ್ಯಾಪಾರ ಸಂಸ್ಥೆಗಳಂಥ ಏಜೆಂಟರ ಮೂಲಕ ಸಾಲ ಹಂಚುವ ಅದು ಸಾಲ ಪಡೆದ ದೇಶಗಳನ್ನು ಜಾಗತೀಕರಣದ ‘ತದ್ರೂಪಿ ತಯಾರಿಕಾ ಉಪಕರಣ’ವಾಗಿ ಮಾರ್ಪಡಿಸುತ್ತದೆ. ಇಂಥ ತದ್ರೂಪಿ ವೇದಿಕೆಯೇ ನೀರಿನ ಖಾಸಗೀಕರಣ. ಮತ್ತೆ ಇವೆಲ್ಲವೂ ನಗರ ಕೇಂದ್ರಿತ.


ಒಂದು ನಿಮಿಷ ಯೋಚಿಸಿ. ನಮ್ಮ ಗ್ರಾಮೀಣ ಪ್ರದೇಶದ, ರೈತ ಸಮುದಾಯದ ನೀರಿನ ಬಳಕೆ ಪ್ರಮಾಣದಲ್ಲಿ ಇನ್ನೂ ಹೇಳಿಕೊಳ್ಳುವ ಯಾವುದೇ ಬದಲಾವಣೆಗಳೂ ಆಗಿಲ್ಲ. ಬದಲಾದದ್ದೆಂದರೆ ಅವರ ನೀರಿನ ಬವಣೆಯಲ್ಲಿ ಮಾತ್ರ. ಹಾಗೆಂದು ಅದು ತಪ್ಪಿದೆ ಎಂದಲ್ಲ. ಅದರ ಸ್ವರೂಪ ಬದಲಾಗಿದೆ. ಇದಕ್ಕೊಂದು ತಾಜಾ ಉದಾಹರಣೆಯೆಂದರೆ ಆಂಧ್ರಪ್ರದೇಶದ ಈ ಬೆಳವಣಿಗೆ. ಇದಕ್ಕೆ ಕಾರಣ ಅಲ್ಲಿನ ಗ್ರಾಮೀಣ ಜಲಮೂಲಗಳು ಸ್ವಚ್ಛವಾಗಿಲ್ಲದಿರುವುದು. ಹೆಚ್ಚಿನ ಕಡೆ ಜಲಮೂಲಗಳೇ ರೋಗರುಜಿನ, ಸಾಂಕ್ರಾಮಿಕಗಳ ತವರಾಗಿವೆ. ಶೇ.೬೦ ಭಾಗ ಗ್ರಾಮೀಣ ಜನತೆಗೆ ಪ್ರತಿದಿನ ಸ್ವಚ್ಛ ಕುಡಿಯುವ ನೀರು ದೊರೆಯುವುದೇ ಕಷ್ಟವಾಗಿದೆಯಂತೆ.


ಈಗ ಇಲ್ಲಿನ ಹಳ್ಳಿಗರ ಪರಿಸ್ಥಿತಿ ಹೇಗಿದೆ ನೋಡಿ: ಸಿಗುವ ಅತ್ಯಲ್ಪ ನೀರನ್ನು ನಿತ್ಯಕಾರ್‍ಯಗಳಿಗೆ ಉಪಯೋಗಿಸಬೇಕು. ಅದನ್ನೇ ಕುಡಿಯಬೇಕು. ಹಳ್ಳಿಯಲ್ಲಿ ಜಲಮೂಲ ಇಲ್ಲವಾದರೆ ಖಾಸಗಿಯವರು ಸರಬರಾಜು ಮಾಡುವ ನೀರನ್ನು ೨೦ ಲೀಟರ್‌ಗೆ ೧೦ ರೂ. ತೆತ್ತು ಕೊಂಡುಕೊಳ್ಳಬೇಕು. ಇದು ಕೂಡ ಶುದ್ಧವಾಗಿರುತ್ತದೆ ಎಂಬ ಭರವಸೆಯೇನಿಲ್ಲ. ಇದಕ್ಕಿಂತ ಹೊಸ ಯೋಜನೆ ಅನುಕೂಲಕರವಲ್ಲವೆ ? ಎಂದು ಸರಕಾರಿ ಅಕಾರಿಗಳು ಪ್ರಶ್ನಿಸುತ್ತಾರೆ. ಇದು ನಮ್ಮ ಉತ್ತರ ಕರ್ನಾಟಕದ ಹಳ್ಳಿಗರ ಪರಿಸ್ಥಿತಿಯಂತೆಯೇ ಕಾಣಿಸುತ್ತದೆ.


ಮೇಲ್ನೋಟಕ್ಕೆ ಈ ಯೋಜನೆ ಆಕರ್ಷಕವಾಗಿಯೇ ಇದೆ. ೨೦ ಲೀಟರ್ ಶುದ್ಧ ನೀರನ್ನು ೨ ರೂ.ಗೆ ಜನರಿಗೆ ನೀಡಲಾಗುತ್ತದೆ. ಪರಿಶಿಷ್ಟ ಜನಾಂಗದವರಿಗೆ ಇದರರ್ಧ ಬೆಲೆಗೆ. ಕೊಳಕು ನೀರಿನಿಂದ ಉಂಟಾಗುವ ತೊಂದರೆ ಇನ್ನಿಲ್ಲ.
ಆದರೆ ಯೋಜನೆಯ ಬಗ್ಗೆ ಅನುಮಾನದ ಅಲೆ ಎದ್ದಿದೆ. ಯೋಜನೆ ಜಾರಿಗೆ ಮುನ್ನ ಗ್ರಾಮ ಪಂಚಾಯತು, ನೀರಾವರಿ ತಜ್ಞರು, ನಾಗರಿಕ ಸಂಘಟನೆಗಳ ಜತೆ ಸಮಾಲೋಚಿಸಿಲ್ಲ. ಒಪ್ಪಂದ ಗ್ರಾಮ ಪಂಚಾಯತು ಹಾಗೂ ಖಾಸಗಿ ಕಂಪನಿಯ ನಡುವೆ ನಡೆಯಬೇಕು. ಇಲ್ಲಿ ಹಾಗಾಗಿಲ್ಲ. ಖಾಸಗಿ ಕಂಪೆನಿ ಇಲ್ಲಿ ಜನರಿಗೆ ನೇರವಾಗಿ ಉತ್ತರದಾಯಿಯಲ್ಲ.


ಇನ್ನು ಲೀಟರ್‌ಗೆ ೧೦ ಪೈಸೆ ಎಂಬ ದರ ಎಲ್ಲಿಯವರೆಗೆ ನಡೆಯುತ್ತದೆ ಎಂಬ ಬಗ್ಗೆ ಖಾತ್ರಿಯಿಲ್ಲ. ಒಪ್ಪಂದದಲ್ಲಿ, ದರ ಹಾಗೇ ಇರುತ್ತದೆಯೇ ಅಥವಾ ಹೆಚ್ಚಾಗುತ್ತದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಕಂಪನಿಗಳು ದರವನ್ನು ಸಿಕ್ಕಾಪಟ್ಟೆ ಏರಿಸಿದರೆ ಬಡಜನತೆ ಎಲ್ಲಿಗೆ ಹೋಗಬೇಕು ? ಜಲಶುದ್ಧೀಕರಣಕ್ಕೆ ಪ್ರಸ್ತಾವಿಸಲಾದ ರಿವರ್ಸ್ ಆಸ್ಮಾಸಿಸ್ ತಂತ್ರಜ್ಞಾನದ ಬಗ್ಗೆ ಕೂಡ ತಜ್ಞರಿಗೆ ಒಳ್ಳೆಯ ಅಭಿಪ್ರಾಯವಿಲ್ಲ. ಊರಿಗೊಂದು ಕೆರೆ- ಬಾವಿಯಿರಬೇಕು, ಅದನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ತಿಳಿವಳಿಕೆ ನಮಗಿಲ್ಲದೇ ಹೋದದ್ದೇ ಈಗ ನಮ್ಮ ಬುಡಕ್ಕೆ ಬಂದಿದೆ ನೋಡಿ. ನಮ್ಮ ರಾಜ್ಯದಲ್ಲೂ ಇಂಥ ಪರಿಸ್ಥಿತಿ ತಲೆದೋರಬಹುದೆ ?
ಇದಕ್ಕಿರುವ ಒಂದೇ ಪರಿಹಾರ-ನಮ್ಮ ಸಾಂಪ್ರದಾಯಿಕ ನೀರು ನಿರ್ವಹಣಾ ಶಾಸ್ತ್ರವನ್ನು ಆಧರಿಸಿ, ಆಧುನಿಕ ಅಗತ್ಯಕ್ಕನುಗುಣವಾಗಿ ನಮ್ಮದೇ ಮಾದರಿಯನ್ನು ರೂಪಿಸಿಕೊಳ್ಳುವುದು. ಮಾದರಿ ಎಂಬುದು ಬೇರೆ ಇಲ್ಲದಿದ್ದಾಗ ನಮಗೆ ಬೇಕಾದಂತೆ ನಾವು ಪದ್ಧತಿಗಳನ್ನು ರೂಪಿಸಿಕೊಳ್ಳುವ ಸ್ವಾತಂತ್ರ್ಯ ಹೊಂದಿರುತ್ತೇವೆ. ಅದನ್ನು ಬಿಟ್ಟು ಬೇರೆ ದೇಶಗಳಲ್ಲಿ ವಿಫಲವಾಗಿರುವ ಖಾಸಗೀಕರಣದಂಥ ಪ್ರಯೋಗಗಳಿಗೆ ನಮ್ಮಲ್ಲಿ ವೇದಿಕೆ ಒದಗಿಸುವುದು ಎಷ್ಟು ಔಚಿತ್ಯ ಪೂರ್ಣ?
ಕೃಷಿಯಂಥ ಕ್ಷೇತ್ರದಲ್ಲೂ ನಾವು ನೀರು ಪೂರೈಕೆಗೆ ಸುಸ್ಥಿರವಲ್ಲದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಹೋಗಿ ತಪ್ಪು ಮಾಡಿದ್ದೇವೆ. ೨೦ ಕೋಟಿಗೂ ಹೆಚ್ಚು ಬಾವಿಗಳು, ಕೊಳವೆ ಬಾವಿಗಳು ನಮ್ಮ ಕೃಷಿ ಸಾಮ್ರಾಜ್ಯವನ್ನು ಆಳುತ್ತಿವೆ. ಕೃಷಿ ನೀರಾವರಿಗೆ ಬಹುತೇಕ ನಾವು ಅಂತರ್ಜಲವನ್ನೇ ಅವಲಂಬಿಸುವ ಪರಿಪಾಠ ಬೆಳೆಸಿಕೊಂಡು ಬಿಟ್ಟಿದ್ದೇವೆ. ಭೂಮಿಯ ಮೇಲ್ಜಲದ ಬಳಕೆ, ಅಂತರ್ಜಲ ಮಟ್ಟದಲ್ಲಿನ ಏರಿಕೆಯ ನಿಟ್ಟಿನಲ್ಲಿ ‘ಹೂಡಿಕೆ’ ಮಾಡುವ ಬದಲು ಯೋಜನೆ’ಗಳ ಮೇಲಿನ ವೆಚ್ಚವನ್ನು ಹೆಚ್ಚಿಸುತ್ತಿದ್ದೇವೆ. ವಿತರಣೆಯಲ್ಲಿನ ಸೋರಿಕೆ, ನಿರ್ವಹಣಾ ದೋಷವನ್ನು ನಿಯಂತ್ರಿಸುವ ಬದಲು ನೀರಿಗೆ ‘ಶುಲ್ಕ’ ಹಾಕಲು ಚಿಂತಿಸುತ್ತಿದ್ದೇವೆ. ಪರ್ಯಾಯ ಬೆಳೆ ಪದ್ಧತಿಯ ಬದಲಿಗೆ ಕೃಷಿ ಉತ್ಪಾದನೆ ಹೆಚ್ಚಿಸಲು ರಸಗೊಬ್ಬರ, ವಿದೇಶಿ ತಳಿಗಳ ಮೊರೆಹೋಗಿದ್ದೇವೆ.
ನೀರಿನ ಮೌಲ್ಯವರಿಯದೇ ಬಳಕೆಗಿಳಿದಿರುವ, ಪೋಲು ಮಾಡುತ್ತಿರುವ ನಮ್ಮ ಇಂಥ ಧೋರಣೆ ಬದಲಾಗಬೇಕು. ಅತಿ ಹೆಚ್ಚು ನೀರಿನ ಬಳಕೆ ಪ್ರದೇಶ ಅತಿ ಹೆಚ್ಚು ನೀರು ಪೋಲಾಗುವ ತಾಣವೆಂಬ ಸ್ಥಿತಿ ಬದಲಾಗಬೇಕು. ಫ್ರಾನ್ಸ್, ಬ್ರಿಟನ್‌ಗಳ ಖಾಸಗೀಕರಣದ ಬದಲು ತಲಾ ೨೦೦ ಲೀಟರ್ ನೀರು ಬಳಕೆಯಿದ್ದ ಪ್ರದೇಶದಲ್ಲಿ ತಲಾ ನೂರರಿಂದ ನೂರಾ ಹತ್ತು ಲೀ. ನೀರಿನ ಬಳಕೆಗೆ ತಗ್ಗಿಸುವ ನಗರಗಳು ಮಾದರಿಯಾಗಬೇಕು. ಅಂಥದೊಂದು ಕ್ರಾಂತಿಯ ಭೀಮನೆಗೆತ ಸಾಧ್ಯವಾದರೆ ಅದು ನಿಜವಾದ ಬದಲಾವಣೆ.


‘ಲಾಸ್ಟ್’ಡ್ರಾಪ್ :
ಆಧುನಿಕ ಸವಾಲಿನ ಹಿನ್ನೆಲೆಯಲ್ಲಿ ನೀರಿಗೆ ಬೆಲೆ ಕಟ್ಟಬೇಕಾದ್ದು ಅನಿವಾರ್ಯ. ಆದರೆ ಭೌತಿಕವಾಗಿ ನೀರನ್ನೇ ಆ ಬೆಲೆಗೆ ಕೊಂಡುಬಿಡುತ್ತೇವೆಂಬುದು ಖಂಡಿತಾ ದಾರ್ಷ್ಟ್ಯ.

ಜಲ ಸಂರಕ್ಷಣೆ: ಗುಜರಾತಿನ ಎಲ್ಲರೂ ಸರದಾರರೇ

ಒಂದು ತಿಳಿದುಕೊಳ್ಳಿ, ಗುಜರಾತ್ ಮೂಲದ ಯಾವುದೇ ನಾಯಕರಿರಬಹುದು. ನೀರಿನ ವಿಷಯದಲ್ಲಿ ಅವರ ಕಳಕಳಿ ಉಳಿದೆಲ್ಲ ರಾಜ್ಯದವರಿಗಿಂತ ಯಾವತ್ತೂ ಒಂದು ಹಿಡಿ ಹೆಚ್ಚೇ ಇರುತ್ತದೆ. ಸ್ಥಳೀಯ ಭೌಗೋಳಿಕ ಸನ್ನಿವೇಶ, ತಲೆತಲಾಂತರದಿಂದ ಗುಜ್ಜುಗಳನ್ನು ಬಿಡದೇ ಕಾಡುತ್ತಿರುವ ಬರಗಾಲ, ನರ್ಮದೆಯಂಥ ನದಿಯನ್ನು ಸಂರಕ್ಷಿಸಿಕೊಳ್ಳುವ ಸವಾಲು ಇವೆಲ್ಲವೂ ಇದಕ್ಕೆ ಕಾರಣವಿರಬಹುದು.


ಗುಜರಾತ್- ರಾಷ್ಟ್ರಪಿತ ಗಾಂಜಿಯವರ ಜನ್ಮಭೂಮಿ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ನೀರಿನ ಬಗೆಗಿನ ಕಾಳಜಿಗೆ ಗಾಂಜಿಯವರೂ ಹೊರತಲ್ಲ ಎಂಬುದನ್ನು ಬೇರೆ ಹೇಳಬೇಕಿಲ್ಲ. ಗ್ರಾಮ ಸ್ವರಾಜ್ಯದ ಕಲ್ಪನೆಯ ಭಾಗವಾಗಿ ದೇಶದ ಲಕ್ಷಾಂತರ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ ಸಮರ್ಥ ಪೂರೈಕೆಯನ್ನು ಪ್ರತಿಪಾದಿಸಿದ್ದರು ಅವರು.


ಅದು ಅಹಮದಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಮಹಾವೇಶನದ ಸಂದರ್ಭ. ಗಾಂಜಿ ಸೇರಿದಂತೆ ದೇಶದ ಮುಂಚೂಣಿ ನಾಯಕರೆಲ್ಲರೂ ಸೇರಿದ್ದರು. ಬೆಳಗಿನ ಕಲಾಪದ ಬಳಿಕ ಎಲ್ಲರೂ ಊಟಕ್ಕೆ ತೆರಳಿದ್ದರು. ಊಟದ ಸಂದರ್ಭದಲ್ಲಿ ಆರಂಭವಾದ ಯಾವುದೋ ಚರ್ಚೆ ಉದ್ದಕ್ಕೂ ಸಾಗಿತ್ತು. ಊಟ ಮುಗಿಸಿ ಎದ್ದ ಗಾಂಜಿ ಮಾತನಾಡುತ್ತಲೇ ಕೈ ತೊಳೆಯಲು ಹೋದರು. ಪಕ್ಕದಲ್ಲೇ ಇದ್ದ ನೆಹರೂ ಚೊಂಬಿನಲ್ಲಿ ಅವರಿಗೆ ನೀರು ಹನಿಸುತ್ತಿದ್ದರು. ಮಾತಿನ ಭರದಲ್ಲಿ ಇಡೀ ತಂಬಿಗೆಯ ನೀರು ಮುಗಿದು ಹೋದದ್ದು ಬಾಪೂಜಿ ಗಮನಕ್ಕೆ ಬರಲೇ ಇಲ್ಲ. ಕೈ ತೊಳೆದು ಮುಗಿದಿರಲಿಲ್ಲ. ನೆಹರೂ ಮತ್ತೊಂದು ಬಾರಿ ಚೊಂಬಿನಲ್ಲಿ ನೀರು ತಂದು ಹನಿಸಲು ಆರಂಭಿಸಿದರು. ತಟ್ಟನೆ ಎಚ್ಚೆತ್ತ ಗಾಂಜಿ ‘ಅಯ್ಯಯ್ಯೋ ಒಂದು ಚೊಂಬು ನೀರು ಖಾಲಿ ಮಾಡಿಬಿಟ್ಟೆನಲ್ಲಾ’ ಎಂದು ಉದ್ಗರಿಸಿದರು.


ತಕ್ಷಣ ನೆಹರೂ ‘ಅದಕ್ಕೇನಂತೆ ಅಹಮದಾಬಾದ್‌ನಲ್ಲಿ ನೀರಿಗೇನೂ ಕೊರತೆ ಇಲ್ಲ. ಯಮುನೆ ತುಂಬಿ ಹರಿಯುತ್ತಿದ್ದಾಳೆ. ಇನ್ನೂ ಒಂದು ಚೊಂಬು ನೀರು ಬಳಸಿ’ಎಂದರು. ಇದಕ್ಕೆ ಗಾಂಜಿ ಪ್ರತಿಕ್ರಿಯೆ ನೋಡಿ-‘ಯಮುನೆ, ನರ್ಮದೆಯರು ಇದ್ದಾರೆಂಬುದೇನೋ ನಿಜ. ಆದರೆ ಅವರು ಇರುವುದು ನನ್ನೊಬ್ಬನ ಅಗತ್ಯ ಪೂರೈಸಲಲ್ಲವಲ್ಲ ?’


ಗಾಂಜಿಯವರ ಈ ಮಾತಿನ ಹಿಂದೆ ಹತ್ತಾರು ಸಂದೇಶಗಳಿವೆ. ಇದು ಅವರೊಬ್ಬರ ಪ್ರತಿಪಾದನೆಯಲ್ಲ. ಗುಜರಾತ್‌ನ ಬಹುತೇಕರು ಇಂಥ ಮನೋಭಾವದೊಂದಿಗೇ ನೀರಿನ ಬಳಕೆಗೆ ಮುಂದಾಗುತ್ತಿರುವುದರಿಂದ ಅಲ್ಲಿ ನೀರಾವರಿಯಲ್ಲಿ ಕಳೆದೊಂದು ದಶಕದಲ್ಲಿ ಊಹೆಗೂ ಮೀರಿದ ಪ್ರಗತಿ ಸಾಧ್ಯವಾಗಿದೆ. ಗುಜರಾತನಲ್ಲಿ ಯಶಸ್ವಿಯಾದ ಮಹತ್ವದ ನೀರಾವರಿ ಯೋಜನೆಯೊಂದರ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ಈ ಮಾತು ಸತ್ಯವೆನಿಸುತ್ತದೆ.


ಹಲವಾರು ವಿವಾದಗಳಿಂದ ಭಾರೀ ಸುದ್ದಿ ಮಾಡಿದ ಸರದಾರ್ ಸರೋವರ ಯೋಜನೆ ಗೊತ್ತೇ ಇದೆ. ಇದೂ ಸಹ ಅದೇ ಅಣೆಕಟ್ಟೆಯಿಂದ ನೀರು ಪೂರೈಸುವ ಯೋಜನೆಯೇ. ಆದರೆ ಇಲ್ಲಿ ಯಾವುದೇ ವಿವಾದ ಇಲ್ಲ. ನರ್ಮದಾ- ಮಾಹಿ ನದಿಗಳಿಂದ ಕುಡಿಯುವ ನೀರು ತೆಗೆದುಕೊಂಡು ಹೋಗಲಾಗಿದೆ.


ಇದರಲ್ಲೇನು ವಿಶೇಷ ? ಖಂಡಿತಾ ವಿಶೇಷವಿದೆ. ಅಸ್ತಿತ್ವದಲ್ಲಿರುವ ಯೋಜನೆಯಿಂದಲೇ ಹೆಚ್ಚುವರಿ ನೀರನ್ನು ಸಮರ್ಪಕವಾಗಿ ಬಳಸಿಕೊಂಡದ್ದೇ ಇದರ ಹೆಗ್ಗಳಿಕೆ. ಮೂಲ ಸರದಾರ ಸರೋವರ ಯೋಜನೆ ಇರುವುದು ಭರೂಚ್ ಜಿಲ್ಲೆಯ ನವಗಾಂವ್ ಎಂಬಲ್ಲಿ. ಈ ಅಣೆಯಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಸುಮಾರು ೩೫೭೧ ಎಂಎಲ್‌ಡಿಯಷ್ಟು ನೀರು ನಿಗದಿಯಾಗಿದೆ. ಇಲ್ಲಿಂದ ಸುಮಾರು ೩೫ ಕಿ. ಮೀ. ದೂರದ ನರ್ಮದಾ ಮುಖ್ಯ ಕಾಲುವೆಗೆ ನೀರನ್ನು ಪಂಪ್ ಮಾಡಲಾಗುತ್ತದೆ. ಆ ಕಾಲುವೆ ತಿಂಬ ಹಳ್ಳಿಯ ಬಳಿ ಮಾಹಿಯ ಕಾಲುವೆಗೆ ಸಂಪರ್ಕಿಸುತ್ತದೆ. ಅಲ್ಲಿಂದ ಮತ್ತೆ ಪ್ರಯಾಣ ಮುಂದುವರಿಸುವ ನೀರು ಕನೇವಲ್ ಹಾಗೂ ಪರೇಜ್ ಎಂಬ ಎರಡು ಬೃಹತ್ ಕೆರೆಗಳ ಒಡಲು ಸೇರುತ್ತದೆ. ಅಲ್ಲಿಗೇ ನೀರಿನ ಯಾನ ನಿಲ್ಲುವುದಿಲ್ಲ. ಮತ್ತೆ ಅಲ್ಲಿಂದ ನೀರನ್ನು ಭಾವನಗರ, ಅಮ್ರೇಲಿ ಹಾಗೂ ರಾಜಕೋಟ್ ಜಿಲ್ಲೆಗಳಿಗೆ, ೪೫೦ ಕಿ.ಮೀ ಉದ್ದದ ಸೌರಾಷ್ಟ್ರ ಪೈಪ್‌ಲೈನ್ ಯೋಜನೆಯ ಮೂಲಕ ಏತದಿಂದ ಕೊಂಡೊಯ್ಯಲಾಗುತ್ತದೆ. ಅಹಮದಾಬಾದ್‌ಗೂ ಇದೇ ನೀರನ್ನು ಕುಡಿಯಲು ಒದಗಿಸಲಾಗುತ್ತಿದೆ.


ಇವಿಷ್ಟು ಯೋಜನೆ. ನಿಜವಾಗಿ ಇಲ್ಲಿ ಸರ್ದಾರ್ ಸರೋವರದಿಂದ ನೀರು ಸರಿಸುಮಾರು ೨೮೦ ಕಿ. ಮೀ. ನಷ್ಟು ದೂರದ ಪ್ರಯಾಣ ಬೆಳೆಸುತ್ತದೆ. ಉದ್ದಕ್ಕೂ ಇರುವ ಸಣ್ಣಪುಟ್ಟ ಕೆರೆಗಳನ್ನು ತುಂಬಿಯೇ ನೀರು ಮುಂದಕ್ಕೆ ಹೋಗುವಂತೆ ಯೋಜಿಸಲಾಗಿದೆ. ಜತೆಗೆ ಕನೇವಲ್ ಹಾಗೂ ಪರೇಜ್ ಕೆರೆಗಳೂ ತುಂಬುವುದರಿಂದ ಸಾವಿರಾರು ಹೆಕ್ಟೇರ್ ಪ್ರದೇಶದ ಅಂತರ್ಜಲ ಮಟ್ಟದಲ್ಲಿ ಅನಾಯಾಸವಾಗಿ ಏರಿಕೆ ಕಂಡು ಬಂದಿದೆ.


ವೈಜ್ಞಾನಿಕ, ದೂರದೃಷ್ಟಿಯಿಂದ ರೂಪಿಸಲಾಗಿರುವ ಯೋಜನೆಗಳು ಹೇಗೆ ಉಪಯುಕ್ತವಾಗುತ್ತವೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ ಎನ್ನುತ್ತಾರೆ ಪ್ರೊ. ಹುಗ್ಗಿ. ಅಂದಾಜು ೧೨೦೦ ಕ್ಯೂಸೆಕ್ ನೀರಿನ ಪಂಪಿಂಗ್ ಸಂದರ್ಭದಲ್ಲೇ ಮಧ್ಯದಲ್ಲಿ ತುಸು ತಿರುವು ತೆಗೆದುಕೊಂಡು ಮೂರು ಪುಟ್ಟ ಪುಟ್ಟ ಒಡ್ಡುಗಳನ್ನು ನಿರ್ಮಿಸಲಾಗಿದೆ. ಇಂಥ ಇನ್ನೂ ಕೆಲವು ಪುಟ್ಟ ಪುಟ್ಟ ನಿರ್ಮಾಣ, ಪ್ರಯತ್ನಗಳಿಂದ ನದಿಯಲ್ಲಿನ ಪ್ರವಾಹದ ನೀರನ್ನೇ ಯಶಸ್ವಿಯಾಗಿ ಬಳಸಿಕೊಳ್ಳಲಾಗಿದೆ.


ದೇಶದಲ್ಲಿ ಇಂದಿಗೂ ಶೇ. ೫೦ರಷ್ಟು ಭೂಭಾಗಕ್ಕೆ ಅಂತರ್ಜಲ ಬಿಟ್ಟು ಅನ್ಯ ಆಸರೆಯಿಲ್ಲ. ಇದರ ನಡುವೆಯೇ ‘ನೀರು ಸರಬರಾಜು ಯೋಜನೆ’ಎಂಬ ಸರಕಾರಿ ಪ್ರಾಯೋಜಿತ ಕಾರ್ಯಕ್ರಮ ಎಗ್ಗಿಲ್ಲದೇ ಸಾಗಿದೆ. ಹಳ್ಳಿ ಹಳ್ಳಿಗಳಿಗೆ (ಕಾಗದದ ಮೇಲೆ) ಇವು ತಲುಪಿವೆ. ದುರಂತವೆಂದರೆ ಇಂಥ ಕಾರ್ಯಕ್ರಮಗಳು ಅನುಷ್ಠಾನಗೊಂಡಿರುವ ಸ್ಥಳಗಳ ನೀರಿಗಾಗಿನ ಹಾಹಾಕಾರ ಉಲ್ಬಣಿಸಿದೆ. ಗಮನಾರ್ಹ ಸಂಗತಿಯೆಂದರೆ, ಹೀಗೆ ‘ನೀರು ಸರಬರಾಜು’ ಇಲ್ಲದ ಹಳ್ಳಿಯ ಮೂಲೆಗಳಲ್ಲಿ, ಗುಡ್ಡಗಾಡುಗಳಲ್ಲಿ ಇಂದಿಗೂ ಜಲ ಸ್ವಾವಲಂಬನೆ ಅಸ್ತಿತ್ವದಲ್ಲಿದೆ. ಅದು ಕಾನೂನಾಗಲೀ, ಕಾರ್‍ಯಕ್ರಮವಾಗಿಯಾಗಲೀ ಹೇರಿಕೆಯಾಗಿಲ್ಲ. ಸಹಜ ಜೀವನವಾಗಿಯೇ ಸಾಗಿದೆ. ಆದ್ದರಿಂದ ನೀರಿನ ವಿಚಾರದಲ್ಲಿ ಸಂಕಷ್ಟವೆಂಬುದನ್ನು ಆ ಮಂದಿ ಅರಿತಿಲ್ಲ. ಅದನ್ನೇ ಮೋದಿಯವರು ಗುಜರಾತ್‌ನ ಎಲ್ಲ ಹಳ್ಳಿಗಳಿಗೆ ದಕ್ಕಿಸಿಕೊಟ್ಟಿದ್ದಾರೆ.


ನೀವು ನಂಬಬೇಕು. ಇಸ್ರೇಲ್ ಈ ವಿಚಾರದಲ್ಲಿ ಮಾದರಿ. ಅಂಥ ಮರುಭೂಮಿಯಲ್ಲೂ ಅತ್ಯಂತ ಸಮೃದ್ಧ ಬೆಳೆ ಬೆಳೆಯುತ್ತಿದ್ದಾರೆ. ದೇಶದ ಬಳಕೆ ಪೂರೈಸಿಕೊಂಡು ಒಂದಿಡೀ ಯುರೋಪಿಗೆ ಹಣ್ಣು ಹಂಪಲು, ತರಕಾರಿಗಳನ್ನು ರಫ್ತು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಅಂತರ್ಜಲ ಬಳಕೆಯ ಹತೋಟಿಯಿಂದ ಅಲ್ಲಿನ ನೀರಾವರಿ ಪ್ರದೇಶ ಒಂದಕ್ಕೆ ಎರಡರಷ್ಟು ಹೆಚ್ಚಿದೆ. ಮೋದಿ ಅದನ್ನೇ ಗುಜರಾತ್‌ನಲ್ಲೂ ಮಾಡುತ್ತಿರುವುದು, ಬೇಕಿದ್ದರೆ ಹೋಗಿ ನೋಡಿ ಬನ್ನಿ.

‘ಲಾಸ್ಟ್’ಡ್ರಾಪ್: ಸಾಕಷ್ಟು ವಿವಾದ, ಅಡ್ಡಿ ಆತಂಕಗಳ ನಡುವೆಯೂ ನೀರಾವರಿಯ ವಿಚಾರದಲ್ಲಿ ನಮಗಿಂತ ಹತ್ತಾರು ಹೆಜ್ಜೆ ಮುಂದೆ ಹೋಗಿರುವ ಗುಜರಾತ್, ಇಂಥ ಇಚ್ಛಾ ಶಕ್ತಿಯಿಂದ ಮಾತ್ರ ಭೀಕರ ಬರಕ್ಕೂ ಎದೆಯೊಡ್ಡಿ ನಿಂತಿದೆ. ಬಂಡವಾಳ ಕ್ರಾಂತಿಯನ್ನೂ ಸಾಸಿದೆ.


Wednesday, October 28, 2009

ಗೋವಿಂದರಾವ್ ಅವರೇ, ಯೋಚಿಸಿ ತಪ್ಪೇನಿಲ್ಲ, ಆದರೆ ಒಳ್ಳೆಯದನ್ನೂ ಯೋಚಿಸಿ


ಕಳೆದ ಐದು ವರ್ಷಗಳಿಂದ ‘ನೀರು-ನೆರಳು’ ಅಂಕಣದಡಿ ೨೩೩ ಲೇಖನಗಳನ್ನು ಬರೆದಿದ್ದೇನೆ. ಈ ಅಂಕಣದ ಓದುಗರೆಲ್ಲರಿಗೂ ಖಂಡಿತ ಗೊತ್ತಿದೆ. ನಾನು ನೆಲ-ಜಲ, ಹಸಿರು-ಉಸಿರಿನ ಆಚೆ ಏನನ್ನೂ ಬರೆಯುವುದಿಲ್ಲ ಅಂತ. ಕಳೆದ ವಾರ ಗುಜರಾತ್ ಮುಖ್ಯಮಂತ್ರಿ ಮೋದಿಯವರ ಬಗ್ಗೆ ಅಂಕಣ ಬರೆಯಲು ಕುಳಿತಾಗಲೂ ಲೇಖನದ ಯಾವ ಭಾಗದಲ್ಲೂ ರಾಜಕೀಯ ಸುಳಿಯದಂತೆ, ತತ್ತ್ವ-ಸಿದ್ಧಾಂತಗಳೆಂಬ ಹಾಳೂಮೂಳುಗಳು ಸೋಂಕದಂತೆ ಎಚ್ಚರವಹಿಸಿದೆ. ನನ್ನ ಇಡೀ ಲೇಖನ ಕೃಷಿ ಕ್ಷೇತ್ರದಲ್ಲಿ ಮೋದಿ ಸಾಸಿರುವ ಆಮೋಘ ಅಭಿವೃದ್ಧಿಯ ಮೇಲಷ್ಟೇ ಬೆಳಕು ಚೆಲ್ಲಿತ್ತು. ಮತ್ತೆ ನೀವು ನನ್ನನ್ನು ಪ್ರಶ್ನಿಸಿದರೂ ಮೋದಿಯವರ ಬಗ್ಗೆ ‘ಚಲನಶೀಲ ಚಿಂತಕ’ ಮತ್ತದೇ ವಿಶೇಷಣ ಬಳಸುತ್ತೇನೆ ! ಹೌದು, ಅನುಮಾನವೇ ಇಲ್ಲ. ಅಭಿವೃದ್ಧಿಯ ದೃಷ್ಟಿಯಿಂದ ನೋಡಿದಾಗ ಗುಜರಾತ್‌ನ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಆ ಪದವೇ ಅತ್ಯಂತ ಸೂಕ್ತ. ಇಂಥ ಪದವನ್ನು ಮೋದಿಯವರಿಗೆ ಬಿಟ್ಟರೆ ಸದ್ಯಕ್ಕೆ ದೇಶದ ಮತ್ಯಾವ ಮುಂಖ್ಯಮಂತ್ರಿಗೂ ಬಳಸಬೇಕೆನಿಸುತ್ತಿಲ್ಲ. ಗುಜರಾತ್‌ನಲ್ಲಿ ಬೇರೇನಾಗಿದೆಯೋ, ಇಲ್ಲವೋ ಗೊತ್ತಿಲ್ಲ. ನೀರಾವರಿ ಮತ್ತು ಕೃಷಿಯ ವಿಚಾರದಲ್ಲಿ ಆಗಿರುವ ಕ್ರಾಂತಿಯನ್ನು ಹೋಗಿ ನೋಡಿದ ವಿವೇಚನಾವಂತರೆಲ್ಲರೂ ಈ ವಿಶೇಷಣವನ್ನು ಒಪ್ಪುತ್ತಾರೆ.


ಹಾಗಂತ ನಾನು ಸುಖಾಸುಮ್ಮನೆ ಹೇಳುತ್ತಿಲ್ಲ !!
ಗುಜರಾತ್‌ಗೆ ಹೋಗಿ, ಅಲ್ಲಿನ ಪ್ರಗತಿಯನ್ನು ಕಣ್ಣಾರೆ ಕಂಡು, ಕೃಷಿ, ನೆಲ, ಜಲದ ಬಗ್ಗೆ ಕಳೆದ ೧೦ ವರ್ಷಗಳಲ್ಲಿ ನಾನು ಮಾಡಿರುವ ಅಧ್ಯಯನದಿಂದ ಅಲ್ಲಿನ ಅಭಿವೃದ್ಧಿಯನ್ನು ಅಳೆದು-ತೂಗಿ ನೋಡಿದ ಮೇಲೆಯೇ ಮೋದಿಯವರ ಸಾಧನೆಯ ಬಗ್ಗೆ ಒಂದಿಷ್ಟು ಮೆಚ್ಚುಗೆಯ ಮಾತುಗಳನ್ನು ಆಡಿದ್ದೇನೆ. ಯಾರೋ ಬರೆದ ಪೂರ್ವಗ್ರಹಪೀಡಿತ ಪುಸ್ತಕಗಳನ್ನು ಆಧಾರವಾಗಿಟ್ಟುಕೊಂಡು, ಅದೇ ಸತ್ಯವೆಂಬಂತೆ ನಾನೆಂದೂ, ಏನನ್ನೂ ಬರೆದವನಲ್ಲ.


ಅಕ್ಟೋಬರ್ ೨೧ರಂದು ‘ವಿಜಯ ಕರ್ನಾಟಕ’ ದ ಸಂಪಾದಕೀಯ ಪುಟದಲ್ಲಿ ‘ಕರ್ನಾಟಕವನ್ನು ಗುಜರಾತ್ ಮಾಡುವುದಕ್ಕೆ ಮುಂಚೆ ಕೊಂಚ ಯೋಚಿಸೋಣ’ ಎಂಬ ಶೀರ್ಷಿಕೆಯಡಿ ಜಿ.ಕೆ. ಗೋವಿಂದರಾವ್ ಬರೆದಿರುವ ಲೇಖನದಲ್ಲಿ ಉಲ್ಲೇಖಿಸಿರುವ ಅಂಶಗಳ ‘ಮೂಲ’ಗಳಾದರೂ ಯಾವುವು? ಲೇಖನದ ಕೊನೆಯಲ್ಲಿ ಅವರ ಗುಜರಾತ್ eನದ ಗುಟ್ಟನ್ನು ಅವರೇ ಬಹಿರಂಗಪಡಿಸಿದ್ದಾರೆ-ಗ್ರಂಥಋಣ: ಗುಜರಾತಿನ ನಿವೃತ್ತ ಡಿ.ಜಿ.ಪಿ. ಆರ್.ಬಿ. ಶ್ರೀಕುಮಾರ್ ಅವರ ‘ಧರ್ಮದ ಹೆಸರಿನಲ್ಲಿ’, ಹರ್ಷ ಮಂದೆರ್ ಅವರ 'Fear & Forgiveness', ಸಿದ್ಧಾರ್ಥ್ ವರದರಾಜನ್ ಸಂಪಾದಿಸಿದ ಕೃತಿ ‘ಗುಜರಾತ್’, ಅರುಂಧತಿರಾಯ್ ಅವರ 'Listening to Grasshoppers' ಮತ್ತು ಶ್ರಮಿಕ್ ಪ್ರತಿಷ್ಠಾನದ 'Modi slapped'!!


ಈ ಶ್ರೀಕುಮಾರ್, ಸಿದ್ಧಾರ್ಥ್ ವರದರಾಜನ್, ಅರುಂಧತಿರಾಯ್ ಯಾರು ? ಗುಜರಾತ್ ಹಿಂಸಾಚಾರದ ತನಿಖೆ ನಡೆಸಿದ ನ್ಯಾಯಾಂಗೀಯ ಆಯೋಗಗಳ ಮುಖ್ಯಸ್ಥರೇ ಅಥವಾ ಸತ್ಯಾಸತ್ಯತೆಯನ್ನು ಪರಾಮರ್ಶಿಸಿ ನ್ಯಾಯದಾನ ಮಾಡುವ ಜಡ್ಜ್‌ಗಳೇ ? ಡಿಜಿಪಿ ಶ್ರೀಕುಮಾರ್ ಅವರನ್ನೇ ತೆಗೆದುಕೊಳ್ಳಿ. ಗುಜರಾತ್ ಹಿಂಸಾಚಾರ ನಡೆದಿದ್ದು ೨೦೦೨ ಫೆಬ್ರವರಿ ೨೭ರ ನಂತರ. ಆಗ ಹಿರಿಯ ಪೊಲೀಸ್ ಅಕಾರಿಯಾಗಿದ್ದ ಡಿಜಿಪಿ ಆರ್.ಬಿ. ಶ್ರೀಕುಮಾರ್, ‘ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಮುಖ್ಯಮಂತ್ರಿ ಮೋದಿ ನನಗೆ ಸೂಚನೆ ನೀಡಿದ್ದರು’ ಎಂದು ಆರೋಪಿಸಿದರು, ಕೊನೆಗೆ ಕೋರ್ಟ್ ಮುಂದೆಯೂ ಅಹವಾಲು ಇಟ್ಟರು. ಆದರೆ ಯಾವಾಗ ? ೨೦೦೭ರಲ್ಲಿ!! ಹಿಂಸಾಚಾರ ನಡೆದಿದ್ದು ೨೦೦೨ರಲ್ಲಿ, ಮೋದಿ ವಿರುದ್ಧ ಶ್ರೀಕುಮಾರ್ ಆರೋಪ ಮಾಡಿದ್ದು ೨೦೦೭ರಲ್ಲಿ !! ಅದುವರೆಗೂ ಏಕೆ ತೆಪ್ಪಗಿದ್ದರು ? ಒಬ್ಬ ಪೊಲೀಸ್ ಅಕಾರಿಯಾಗಿ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕಾಗಿದ್ದು ಕರ್ತವ್ಯ. ಒಂದು ವೇಳೆ, ಮೋದಿಯವರು ಅಂಥದ್ದೊಂದು ಸೂಚನೆ ನೀಡಿದ್ದರೆ ಕೂಡಲೇ ನ್ಯಾಯಾಂಗದ ಮುಂದೆ ಅದನ್ನು ಅರಿಕೆ ಮಾಡಿಕೊಳ್ಳಬಹುದಿತ್ತಲ್ಲವೆ ? ಕನಿಷ್ಠ ಮಾಧ್ಯಮಗಳ ಮುಂದೆಯಾದರೂ ಬಾಯ್ಬಿಡಬಹುದಿತ್ತಲ್ಲವೆ ? ಏಕೆ ಸುಮ್ಮನೆ ಕುಳಿತಿದ್ದರು ? ಆದರೆ ಸತ್ಯವಿಷ್ಟೇ- ಯಾವಾಗ ಡಿಜಿಪಿ ಶ್ರೀಕುಮಾರ್‌ಗೆ ಐಜಿ ಸ್ಥಾನ ದಕ್ಕುವುದಿಲ್ಲ ಎಂದು ಗೊತ್ತಾಯಿತೋ ಆ ಕೂಡಲೇ ಸೆಕ್ಯುಲರ್ ಬ್ರಿಗೇಡ್ ಸೇರಿಕೊಂಡು ಇಂಥದ್ದೊಂದು ಆರೋಪ ಮಾಡತೊಡಗಿದರು !! ಇನ್ನು ಸಿದ್ಧಾರ್ಥ್ ವರದರಾಜನ್. ಆತ ಹೇಳಿ-ಕೇಳಿ ಸಿಪಿಎಂ ಮತ್ತು ಸಿಪಿಐ ಮುಖವಾಣಿಯಂತಿರುವ, ಕೆಲವೊಮ್ಮೆ ಚೀನಾದ ಮುಖವಾಣಿಯಂತೆಯೂ ವರ್ತಿಸುವ ‘ದಿ ಹಿಂದೂ’ ಪತ್ರಿಕೆಯ ವಿಶೇಷ ವರದಿಗಾರ ಹಾಗೂ ಅಂಕಣಕಾರ. ಆತನಿಂದ ಅದ್ಯಾವ ನಿಷ್ಪಕ್ಷಪಾತವನ್ನು ನಿರೀಕ್ಷಿಸಲು ಸಾಧ್ಯ? ಸುಪ್ರಿಂ ಕೋರ್ಟ್‌ನಿಂದಲೇ ಛೀಮಾರಿ ಹಾಕಿಸಿಕೊಂಡಿದ್ದ ಅರುಂಧತಿ ರಾಯ್ ಅವರ ‘ಘನತೆ’ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾ?


ಇಂಥವರನ್ನು ಉಲ್ಲೇಖಿಸಿ, ಅವರು ಉಗುಳಿದ್ದನ್ನೇ ತೀರ್ಥವೆಂಬಂತೆ ಕೈಯಲ್ಲೆತ್ತಿಕೊಂಡು ಕನ್ನಡಿಗರ ತಲೆಮೇಲೆ ಪ್ರೋಕ್ಷಣೆ ಮಾಡಲು ಹೊರಟಿದ್ದೀರಲ್ಲಾ ಗೋವಿಂದರಾವ್ ಅವರೇ ನಿಮಗೆ ಸ್ವಂತ ಅಭಿಪ್ರಾಯವೇ ಇಲ್ಲವೆ ? ನೀವು ಹೊಸದೇನನ್ನೂ ಮಾಡಿಲ್ಲ ಬಿಡಿ ಸಾರ್. ನಿಮ್ಮ ಆದರ್ಶಪುರುಷರಾಗಿರುವ ಕಮ್ಯುನಿಸ್ಟರು ಈ ಕೆಲಸವನ್ನು ಸ್ವಾತಂತ್ರ್ಯ ಬಂದಂದಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ರೋಮಿಲಾ ಥಾಪರ್, ಆರ್.ಎಸ್. ಶರ್ಮಾ, ಇರ್ಫಾನ್ ಹಬೀಬ್, ರವೀಂದರ್ ಕುಮಾರ್, ಸುಮಿತ್ ಸರ್ಕಾರ್ ಮುಂತಾದ ಕಮ್ಯುನಿಸ್ಟ್ ಇತಿಹಾಸಕಾರರು ಬಾಯಿಗೆ ಬಂದಿದ್ದನ್ನು ಬರೆಯುತ್ತಾರೆ. ಉಳಿದ ಕಮ್ಯುನಿಸ್ಟರು ಅದೇ ಆಧಾರವಾಗಿಟ್ಟುಕೊಂಡು ವಿಶ್ವವಿದ್ಯಾಲಯಗಳಲ್ಲಿ ಸಾರ್ವಕಾಲಿಕ ಸತ್ಯವೆಂಬಂತೆ ಬೋಸುತ್ತಾರೆ. ಅವರೆಂತಹ ಹಿಸ್ಟಾರಿಯನ್‌ಗಳೆಂದರೆ ಬಾಬರ್, ಔರಂಗಜೇಬನಂತವರಲ್ಲಿ ಧರ್ಮಸಹಿಷ್ಣುತೆ ಹುಡುಕಿ, ಬರೆದು ಕೊಂಡಾಡುತ್ತಾರೆ. ನಂತರ ಉಳಿದ ಭಟ್ಟಂಗಿಗಳು ಅದನ್ನೇ ‘ಕೋಟ್ ’ ಮಾಡಿ ಉಳಿದವರ ಕಣ್ಣಿಗೆ ಮಂಕುಬೂದಿ ಎರಚುತ್ತಾರೆ. ನೀವು ಮಾಡಿದ್ದೂ ಅದನ್ನೇ.
ಹಾಗಂತ ಹೇಳಲೇಬೇಕಾಗಿದೆ.


ನೀವೆಂದಾದರೂ ಗುಜರಾತ್‌ಗೆ ಹೋಗಿ, ನೋಡಿ ಬಂದು ಬರೆದಿದ್ದರೆ ಅಲ್ಪ-ಸ್ವಲ್ಪವಾದರೂ ಸತ್ಯವಿರಬಹುದೇನೋ ಎಂದು ನಾವೂ ಒಪ್ಪಿಕೊಳ್ಳಬಹುದಿತ್ತು. ಆದರೆ ಮಾಡಿದ್ದೇನು ? ‘ಆರ್ಮ್‌ಚೇರ್ ಎಕ್ಸ್‌ಫರ್ಟ್’ ಕೆಲಸವನು ! ಕುಳಿತಲ್ಲೇ ನಿಮ್ಮ ಆಂತರ್ಯಕ್ಕೆ ಹತ್ತಿರದವರು ಬರೆದ ಪುಸ್ತಕಗಳನ್ನು ಆಧಾರವಾಗಿಟ್ಟುಕೊಂಡು ಗೀಚಿದಿರಿ ಅಷ್ಟೇ. ಆದರೆ ನಾನೆಂದೂ ಕುಳಿತಲ್ಲೇ ಬರೆದವನಲ್ಲ.
‘ಈ ನಿಟ್ಟಿನಲ್ಲಿ, ಪ್ರಾಸಂಗಿಕವಾಗಿ, ಜಗತ್ತಿನ ಅತ್ಯಂತ ಅಭಿವೃದ್ಧಿಗೊಂಡ ರಾಷ್ಟ್ರಗಳತ್ತ ಒಂದು ಕ್ಷಣ ಗಮನಹರಿಸುವುದು ಅವಶ್ಯವೆನಿಸುತ್ತದೆ. ಮೊದಲ ಮಹಾಯುದ್ಧದಿಂದ ಜರ್ಝರಿತವಾಗಿಹೋಗಿದ್ದ ಜರ್ಮನಿ ರಾಷ್ಟ್ರವನ್ನು ಹಿಟ್ಲರ್ ಹನ್ನೆರಡೇ ವರ್ಷಗಳಲ್ಲಿ ನಾಗಾಲೋಟದ ವೇಗದಲ್ಲಿ ಅಭಿವೃದ್ಧಿಗೊಳಿಸಿ ಜಗತ್ತನ್ನೇ ಬೆದರಿಸುವಂಥ ಸ್ಥಿತಿಗೆ ಏರಿಸಿದ. ಅವನು ಸಾಸಿದ ಈ ಬಗೆಯ ‘ಅಭಿವೃದ್ಧಿ’ಯನ್ನು ಇಂದು ನಾವು ಮಾದರಿಯಾಗಿ ಒಪ್ಪಲು ಸಾಧ್ಯವೆ ? ಸ್ಟಾಲಿನ್ ರಷ್ಯಾ ಅಥವಾ ಮಾವೋವಿನ ಚೈನಾದ ವಿಷಯಗಳಲ್ಲಿ ಆ ರಾಷ್ಟ್ರಗಳಲ್ಲಿ ನಡೆದ ನೈಜ ಘಟನೆಗಳಿಗೆ ಬಹು ಪ್ರeಪೂರ್ವಕವಾಗಿ ಕುರುಡಾದವರು ಮಾತ್ರ ಆ ಬಗೆಯ ಅಭಿವೃದ್ಧಿಯನ್ನು ಕೊಂಡಾಡಬಲ್ಲರು. ಈ ಮುರೂ ರಾಷ್ಟ್ರಗಳಲ್ಲಿ ಲಕ್ಷಾಂತರ ಜನಗಳ ಗೋರಿಗಳ ಮೇಲೆ ರಾಷ್ಟ್ರವನ್ನು ‘ಬಲಿಷ್ಠ’ಗೊಳಿಸಲಾಯಿತು. ಹೋಗಲಿ, ಪ್ರಜಾಪ್ರಭುತ್ವ ರಾಷ್ಟ್ರವೆಂದು ಬೀಗುವ, ಈಗಲಂತೂ ಏಕಮೇವಾದ್ವಿತೀಯ- ಚಿಂತಕ ನೋಮ್ ಚೋಮ್‌ಸ್ಕಿ ಹೇಳುವಂತೆ- 'Rogue Stute' ಆಗಿರುವ ಅಮೆರಿಕದ ಕತೆಯೇನು ? ತನ್ನ ರಾಷ್ಟ್ರದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಭರಾಟೆಯಲ್ಲಿ ಅಮೆರಿಕ, ಮಿಕ್ಕೆಲ್ಲ ಚಿಕ್ಕ ದೊಡ್ಡ ರಾಷ್ಟ್ರಗಳ ರಾಜಕೀಯ, ಆರ್ಥಿಕ ಸ್ವಾತಂತ್ರ್ಯ ಗಳಿಕೆಯಲ್ಲಿ ಯತ್ನಗಳನ್ನೂ, ಹೋರಾಟಗಳನ್ನೂ ದಮನ ಮಾಡುವುದು ಅಥವಾ ಪ್ರಜಾಪ್ರಭುತ್ವ ತರುತ್ತೇನೆಂಬ ಅಪ್ಪಟ ಸುಳ್ಳಿನ ಮುಖವಾಡದಲ್ಲಿ ಲಕ್ಷಾಂತರ ಜನಗಳನ್ನು ಸುಟ್ಟು ಬೂದಿ ಮಾಡುವುದು, ತನ್ಮೂಲಕ ನಿರಂತರ ಯುದ್ಧ ಸ್ಥಿತಿಯನ್ನು ನಿರ್ಮಾಣ ಮಾಡಿ ತನ್ನ ರಾಷ್ಟ್ರದ ಯುದ್ಧೋಪಕರಣ ಉತ್ಪಾದನಾ ಉದ್ಯಮವನ್ನು ಅಭಿವೃದ್ಧಿಗೊಳಿಸಿ, ತನ್ನ ಬೊಕ್ಕಸ ತುಂಬಿಸಿಕೊಳ್ಳುವುದು- ಇದೇ ಪರಿಪಾಠವನ್ನು ಅನುಸರಿಸುತ್ತಿದೆ. ಪ್ರಪ್ರಥಮ ಅಣುಬಾಂಬ್ ಸೊಟಿಸಿ ಕೋಟ್ಯಂತರ ಜನರನ್ನು ಆಹುತಿ ತೆಗೆದುಕೊಂಡು ಅಭಿವೃದ್ಧಿಶೀಲತೆಯ ಭಯಂಕರ ನಿಜಸ್ವರೂಪವನ್ನು ಅನಾವರಣಗೊಳಿಸಿದ್ದು ಅಮೆರಿಕ ರಾಷ್ಟ್ರವೇ.’


ಹಾಗಂತ ಬರೆದಿದ್ದೀರಲ್ಲಾ ಅದರ ಅರ್ಥವೇನು ಸ್ವಾಮಿ ?
ಏಕೆ ಗೋಜಲು ಗೋಜಲಾಗಿ ಬರೆಯುತ್ತೀರಿ ? ಅಸಂಬದ್ಧ ಉದಾಹರಣೆ ಕೊಡುತ್ತೀರಿ? ಹಿಟ್ಲರ್ ಹನ್ನೆರಡೇ ವರ್ಷಗಳಲ್ಲಿ ನಾಗಾಲೋಟದಲ್ಲಿ ಜರ್ಮನಿಯನ್ನು ಅಭಿವೃದ್ಧಿಪಡಿಸಿದ ಅಂತ ನಿಮಗೆ ಹೇಳಿಕೊಟ್ಟಿದ್ದು ಯಾರು ? ಹಿಟ್ಲರ್ ಅಕಾರಕ್ಕೆ ಬಂದಿದ್ದು ೧೯೩೩ರಲ್ಲಿ. ಅಲ್ಲಿಂದ ೧೯೩೯ರವರೆಗೂ ಆತ ಮಾಡಿದ್ದು ಯುದ್ಧಸಿದ್ಧತೆಯನ್ನೇ ಹೊರತು ಮತ್ತೀನೆನನ್ನೂ ಅಲ್ಲ. ೧೯೩೮ರಲ್ಲಿ ಆಸ್ಟ್ರೀಯಾವನ್ನು ಕಬಳಿದ ಹಿಟ್ಲರ್ ಅಲ್ಲಿನ ಆಗಾಧ ಖನಿಜ ಸಂಪನ್ಮೂಲವನ್ನು ಲೂಟಿ ಹೊಡೆದು ಯುದ್ಧಕ್ಕೆ ಸನ್ನದ್ಧನಾದನೇ ಹೊರತು ಆತ ಯಾವ ಪ್ರಗತಿ, ಅಭಿವೃದ್ಧಿಯನ್ನೂ ಮಾಡಿದವನಲ್ಲ. ತಂತ್ರeನದ ವಿಷಯದಲ್ಲಿ ಜರ್ಮನ್ನರು ೧೫ನೇ ಶತಮಾನದಲ್ಲೇ ಹೆಸರು ಮಾಡಿದ್ದರು. ಹಿಟ್ಲರ್ ಮಾಡಿದ್ದೇನೂ ಇಲ್ಲ. ಇನ್ನು ಅದ್ಯಾವ ದೃಷ್ಟಿಯಲ್ಲಿ ಹಿಟ್ಲರ್, ಸ್ಟಾಲಿನ್, ಲೆನಿನ್, ಮಾವೋಗಳನ್ನು ಮೋದಿ ವಿಷಯದಲ್ಲಿ ಎಳೆದು ತರುತ್ತೀರಿ?


ಹಿಟ್ಲರ್‌ನ ಹೋಲೋಕಾಸ್ಟ್‌ನಲ್ಲಿ ಸತ್ತವರ ಸಂಖ್ಯೆ ೧೧ ದಶಲಕ್ಷ(೧.೧ ಕೋಟಿ), ಸ್ಟಾಲಿನ್ ನೀತಿಗೆ ಬಲಿಯಾಗಿದ್ದು ೨೦ ದಶಲಕ್ಷ, ಲೆನಿನ್ ಬಲಿತೆಗೆದುಕೊಂಡಿದ್ದು ೨೦ ಲಕ್ಷ, ಮಾವೋನಿಂದಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆಯನ್ನು ೪೦ರಿಂದ ೨೦ ದಶಲಕ್ಷ ಎಂದು ಅಂದಾಜು ಮಾಡಲಾಗಿದೆ ! ಅವರಿಗೆ ಹೋಲಿಸುವಂತಹ ಯಾವ ಪಾತಕವನ್ನು ಮೋದಿ ಮಾಡಿದ್ದಾರೆ ? ಒಬ್ಬ ಶಾಸಕನೂ ಆಗಿರದಿದ್ದ, ರಾಜಕೀಯದ ಯಾವುದೇ ಅನುಭವ ಇಲ್ಲದೆ ಮೋದಿ ಮುಖ್ಯಮಂತ್ರಿಯಾಗಿದ್ದು ೨೦೦೧, ಅಕ್ಟೋಬರ್ ೭ರಂದು. ಗುಜರಾತ್ ಹಿಂಸಾಚಾರ ಆರಂಭವಾಗಿದ್ದು ೨೦೦೨, ಫೆಬ್ರವರಿ ೨೭ರಂದು. ಅಕಾರಕ್ಕೆ ಬಂದು ಐದು ತಿಂಗಳೂ ಆಗಿರಲಿಲ್ಲ. ಅಂತಹ ವ್ಯಕ್ತಿ ಹಿಂಸಾಚಾರವನ್ನು ತಡೆಗಟ್ಟುವುದರಲ್ಲಿ ಸ್ವಲ್ಪ ಎಡವಿರಬಹುದೇ ಹೊರತು, ಕೊಲೆಪಾತಕಿಯಾಗಿರಲು ಸಾಧ್ಯವಿಲ್ಲ. ಅಷ್ಟಕ್ಕೂ ಗುಜರಾತ್ ಹಿಂಸಾಚಾರದಲ್ಲಿ ಮಡಿದವರ ಸಂಖ್ಯೆಯೆಷ್ಟು? ಮುಸ್ಲಿಮರು ೭೯೦, ಹಿಂದೂಗಳು ೨೫೪ !! ಕೋಟಿ ಕೋಟಿ ಜನರನ್ನು ಕೊಲೆಗೈದವರಿಗೂ ಮೋದಿಗೂ ವ್ಯತ್ಯಾಸವೇ ಇಲ್ಲವೆ? ಮಹಾರಾಷ್ಟ್ರ ಮತ್ತು ಆಂಧ್ರದಲ್ಲಿ ಕಳೆದ ೧೦ ವರ್ಷಗಳಲ್ಲಿ ೫೦ ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ? ಏಕೆ ಅವರೆಲ್ಲ ನೇಣಿಗೆ ಶರಣಾದರು? ಅವರ ಸಾವಿಗೆ ಮಹಾರಾಷ್ಟ್ರ ಮತ್ತು ಆಂಧ್ರ ಸರಕಾರದ ಹೊಣೆಗೇಡಿತನ, ಸಂವೇzsದನಾರಹಿತ ನೀತಿ, ನಿರ್ಲಕ್ಷ್ಯಗಳು ಕಾರಣವಲ್ಲವೆ? ರೈತರ ಸಾವಿಗೆ ನೇರ ಹಾಗೂ ಪರೋಕ್ಷ ಹೊಣೆಗಾರರಲ್ಲವೆ ? ಅಂದರೆ ಆಂಧ್ರ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳನ್ನೂ ಸಾಮೂಹಿಕ ಸಾವಿಗೆ ಕಾರಣೀಭೂ ತರನ್ನಾಗಿ ಮಾಡಬಹುದಲ್ಲವೆ?


‘ಪ್ರಪ್ರಥಮ ಅಣುಬಾಂಬ್ ಸೊಟಿಸಿ ಕೋಟ್ಯಂತರ ಜನರನ್ನು ಆಹುತಿ ತೆಗೆದುಕೊಂಡು ಅಭಿವೃದ್ಧಿಶೀಲತೆಯ ಭಯಂಕರ ನಿಜಸ್ವರೂಪವನ್ನು ಅನಾವರಣಗೊಳಿಸಿದ್ದು ಅಮೆರಿಕ ರಾಷ್ಟ್ರವೇ’ ಎಂದು ಯಾಕ್ರೀ ಹಸಿ ಹಸಿ ಸುಳ್ಳು ಹೇಳುತ್ತೀರಿ ?! ೧೯೪೫ರಲ್ಲಿ ಅಮೆರಿಕ ಸೋಟಿಸಿದ ಅಣುಬಾಂಬ್‌ಗೆ ಸಿಲುಕಿ ಹಿರೋಷಿಮಾದಲ್ಲಿ ಸತ್ತವರು ೧.೪ ಲಕ್ಷ, ನಾಗಾಸಾಕಿಯಲ್ಲಿ ಸುಟ್ಟು ಕರಕಲಾದವರು ೮೦ ಸಾವಿರ. ಒಟ್ಟಾರೆ ೨ಲಕ್ಷದ ೨೦ ಸಾವಿರ. ಏಕೆ ‘ಕೋಟ್ಯಂತರ’ ಎಂದು ಸುಳ್ಳು ಬರೆಯುತ್ತೀರಿ? ಖಂಡಿತ Words are free, But ಅವುಗಳನ್ನು ಬಳಸುವಾಗ ಎಚ್ಚರಿಕೆ ಇರಬೇಕು ಅಲ್ಲವೆ ‘ಡಾಕ್ಟರ್’ ಗೋವಿಂದರಾವ್ ?!


“ನಮಗೆ ಅವಶ್ಯವಿರುವುದು ಸರ್ವಾಂಗೀಣ ಅಭಿವೃದ್ಧಿ. ಸರ್ವಾಂಗೀಣ ಅಭಿವೃದ್ಧಿಯೇ ಪ್ರಗತಿ. ಮನುಷ್ಯನ ಮನಸ್ಸನ್ನು ಮುಟ್ಟುವಂಥ, ಅರಳಿಸುವಂಥ, ಬೆಳೆಸುವಂಥ, ಮನುಷ್ಯ ಸಂಬಂಧಗಳನ್ನು ಆಪ್ತಗೊಳಿಸುವಂಥ, ಜೀವಪ್ರೇಮವನ್ನು ಹುಟ್ಟಿಸುವಂಥ ಅಭಿವೃದ್ಧಿಯೇ ಪ್ರಗತಿ." ನೀವೇ ಬರೆದಿದ್ದೀರಿ. ನಾನು ಬೆಳಕು ಚೆಲ್ಲಿರುವುದೂ ಗುಜರಾತ್‌ನಲ್ಲಿ ಕಂಡುಬರುತ್ತಿರುವ ಅಂತಹ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆಯೇ. ನರ್ಮಾದಾ ನದಿಯ ನೀರು ಹಿಂದೂಗಳ ಜತೆಗೆ ಮುಸ್ಲಿಮರ ಮನೆ, ಹೊಲ, ಗದ್ದೆಗಳನ್ನೂ ಹದಮಾಡುತ್ತಿದೆ. ಏಕೆ ನಿಮ್ಮ ಎದೆಯಲ್ಲಿರುವ ತಾರತಮ್ಯದ ವಿಷಬೀಜವನ್ನು ಬಿತ್ತಲು ಹೊರಟಿದ್ದೀರಿ?!
ಛೇ ಛೇ!

ಈ ಬಾರಿ ಲಾಸ್ಟ್ ‘ಡ್ರಾಪ್’ ಅಲ್ಲ, ಪಂಚ್: ಬಹುಶಃ ನನ್ನ ಲೇಖನ ಸಂಪೂರ್ಣ ಓದುವ ಮೊದಲೇ, ಕೇವಲ ತಲೆಬರಹ ನೋಡಿ ಗೋವಿಂದ ರಾಯರು ಪ್ರತಿ ಕ್ರಿಯಿಸಿರಬಹುದು ಎನಿಸುತ್ತದೆ. ಇಲ್ಲದಿದ್ದರೆ ಅಭಿವೃದ್ಧಿಯ ವಿಷಯಕ್ಕೆ ಕೋಮುವಾದದಂಥ ಸಲ್ಲದ ಬಣ್ಣ ಹಚ್ಚುವ ಕಸರತ್ತು ಮಾಡುತ್ತಿರಲಿಲ್ಲ.

ಅಭಿವೃದ್ಧಿಗೆ ಯಾವ ಇಸಂ ಸ್ವಾಮೀ, ರಾಯರೇ ?


ಲನಶೀಲ ಚಿಂತಕ, ಮತ್ತದೇ ವಿಶೇಷಣ ಬಳಸುತ್ತಿದ್ದೇನೆ. ಹೌದು, ಅನುಮಾನವೇ ಇಲ್ಲ. ಅಭಿವೃದ್ಧಿಯ ದೃಷ್ಟಿಯಿಂದ ನೋಡಿದಾಗ ಗುಜರಾತ್‌ನ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಆ ಪದವೇ ಅತ್ಯಂತ ಸೂಕ್ತ. ಇಂಥ ಪದವನ್ನು ಮೋದಿಯವರಿಗೆ ಬಿಟ್ಟರೆ ಸದ್ಯಕ್ಕೆ ದೇಶದ ಮತ್ಯಾವ ಮುಖ್ಯಮಂತ್ರಿಗೂ ಬಳಸಬೇಕೆನಿಸುತ್ತಿಲ್ಲ. ಗುಜರಾತ್‌ನಲ್ಲಿ ಬೇರೇನಾಗಿದೆಯೋ, ಇಲ್ಲವೋ ಗೊತ್ತಿಲ್ಲ. ನೀರಾವರಿ ಮತ್ತು ಕೃಷಿಯ ವಿಚಾರದಲ್ಲಿ ಆಗಿರುವ ಕ್ರಾಂತಿಯನ್ನು ಹೋಗಿ ನೋಡಿದ ವಿವೇಚನಾವಂತರೆಲ್ಲರೂ ಈ ವಿಶೇಷಣವನ್ನು ಒಪ್ಪುತ್ತಾರೆ. ಉಳಿದವರ ಬಗೆಗೆ ನನ್ನಲ್ಲಿ ಅತ್ಯಂತ ಅಸಹಾಯಕ ಮರುಕವಷ್ಟೇ ಹುಟ್ಟುತ್ತದೆ. ಮೋದಿಯವರ ಕೃಷಿ ಕ್ರಾಂತಿಯ ಬಗೆಗೆ ಬರೆಯುವ ಮುನ್ನ ಸ್ವತಃ ಗುಜರಾತ್‌ಗೆ ಹೋಗಿ ನೋಡಿ ಬಂದು ಬರೆದದ್ದೇ ವಿನಃ ಬೇರೆಯವರ ಯಾವುದೋ ಮೂರ್‍ನಾಲ್ಕು ಲೇಖನಗಳನ್ನು ಉಲ್ಲೇಖಿಸಿ ನಾಲ್ಕು ಗೋಡೆಯ ಮಧ್ಯೆ ಕುಳಿತು ಬರೆದದ್ದು ಅಲ್ಲ ಎಂಬುದನ್ನು ಮನಗಾಣಲೇ ಬೇಕು.
ಅಲ್ಲ, ನನ್ನ ಪ್ರಶ್ನೆ ಇಷ್ಟೆ, ಮೋದಿಯವರ ಹೆಸರು ಹೇಳಿದಾಕ್ಷಣ ಇವರೇಕೆ ಹೀಗೆ ಮೈಮೇಲೆ ದೆವ್ವ ಬಂದವರಂತೆ ಆಡುತ್ತಾರೆ ಅರ್ಥವೇ ಆಗುತ್ತಿಲ್ಲ ? ಅಷ್ಟಕ್ಕೂ ಕಳೆದ ವಾರ ಈ ಅಂಕಣದ ( ಕರ್ನಾಟಕವನ್ನು ಮತ್ತೊಂದು ಗುಜರಾತ್ ಮಾಡಿ, ಪ್ಲೀಸ್...) ಆರಂಭದಲ್ಲೇ ಸ್ಪಷ್ಟಪಡಿಸಿದ್ದೇನೆ. ‘ಮೋದಿ ಎಂದ ತಕ್ಷಣವೇ ಕೇವಲ ಹಿಂದೂ-ಮುಸ್ಲಿಂ ಪ್ರಕರಣವನ್ನೇ ನಮ್ಮ ಮಾದ್ಯಮಗಳು ಬಿಂಬಿಸುತ್ತವೆ. ಈ ದೇಶದ ಜೀವಾಳವೆನಿಸಿರುವ ಕೃಷಿಯಲ್ಲಾದ ಕ್ರಾಂತಿ ಸುದ್ದಿಯಾಗುವುದಿಲ್ಲ ಏಕೆ?’ ಎಂಬುದು ಅಂದಿನ ಬರಹದ ಮೂಲಭೂತ ಪ್ರಶ್ನೆಯಾಗಿತ್ತು. ಕೃಷಿ ಮತ್ತು ನೀರಾವರಿಯಲ್ಲಿ ಮೋದಿಯವರು ಕೈಗೊಂಡಿರುವ ನೈಜ ಕ್ರಾಂತಿಯ ಬಗೆಗೇ ಇಡೀ ಲೇಖನದುದ್ದಕ್ಕೂ ವಿವರಣೆ ಒದಗಿಸಲಾಗಿತ್ತು. ಕಾಮಾಲೆ ಕಣ್ಣಿನ ಸನ್ಮಾನ್ಯ ಜಿ.ಕೆ.ಗೋವಿಂದರಾವ್ ಅವರಂಥ ಅತ್ಯಂತ ಜಾತ್ಯತೀತ ಹಾಗೂ ಬುದ್ಧಿಜೀವಿ ( ಈ ಎರಡೂ ಪದಗಳಿಗೆ ನನಗಿನ್ನೂ ಅರ್ಥ ದೊರಕಿಲ್ಲ) ವ್ಯಕ್ತಿಗಳಿಗೆ ಇದೇಕೆ ಅರ್ಥವೇ ಆಗಿಲ್ಲ ? ಬಹುಶಃ ನನ್ನ ಲೇಖನ ಸಂಪೂರ್ಣ ಓದುವ ಮೊದಲೇ, ಕೇವಲ ತಲೆಬರಹ ನೋಡಿ ಅವರು ( ಅ.೨೧ರ ಸಂಚಿಕೆಯಲ್ಲಿ ಪ್ರಕಟವಾದ-‘ಕರ್ನಾಟಕವನ್ನು ಗುಜರಾತ್ ಮಾಡುವ ಮುಂಚೆ ಕೊಂಚ ಯೋಚಿಸೋಣ’ )ಪ್ರತಿಕ್ರಿಯಿಸಿರಬಹುದು ಎನಿಸುತ್ತದೆ. ಇಲ್ಲದಿದ್ದರೆ ಅಭಿವೃದ್ಧಿಯ ವಿಷಯಕ್ಕೆ ಕೋಮುವಾದದಂಥ ಸಲ್ಲದ ಬಣ್ಣ ಹಚ್ಚುವ ಕಸರತ್ತು ಮಾಡುತ್ತಿರಲಿಲ್ಲ.
ಸ್ವಾಮಿ ಗೋವಿಂದರಾಯರೇ, ನಿಮ್ಮ ಹಿರಿತನ, ಪ್ರತಿಭೆಯ ಬಗೆಗೆ ಖಂಡಿತಾ ಗೌರವವಿದೆ. ಆದರೆ ಬೌದ್ಧಿಕತೆ, ಜಾತ್ಯತೀತತೆ ಎಂಬುದು ನಿಮ್ಮಂಥವರಿಗೆ ಮಾತ್ರ ಮಾರಾಟವಾಗಿದೆ ಎಂಬ ನಿಮ್ಮಗಳ ಧೋರಣೆಯ ಬಗ್ಗೆ ಮಾತ್ರ ನನ್ನ ಆಕ್ಷೇಪವಿದೆ. ಕಳೆದ ಐದು ವರ್ಷಗಳಿಂದ ಈ ಅಂಕಣದಲ್ಲಿ ನೀರಿನ ಬಗೆಗೆ ಬರೆಯುತ್ತ ಬರಲಾಗಿದೆ. ಈಗಲೂ ಈ ಅಂಕಣ ನೀರಿಗೇ ಮೀಸಲು. ಅನಿವಾರ್ಯವಾಗಿ ಈ ವಾರ ನಿಮ್ಮಂಥವರ ಲೇಖನಕ್ಕೆ ಪ್ರತಿಕ್ರಿಯಿಸಬೇಕಾಗಿ ಬಂದಿದೆ. ಇಲ್ಲದಿದ್ದರೆ ಖಂಡಿತಾ, ಇದು ಅಭಿವೃದ್ಧಿಪರ ವಿಷಯಗಳಿಗೆ, ನೀರಿನ ಯಶೋಗಾಥೆಗಳಿಗೆ ಸೀಮಿತವೇ ಹೊರತು, ಯಾರನ್ನೋ ಟೀಕಿಸಲು, ಅಗ್ಗದ ಭಾಷಾ ಪ್ರೌಢಿಮೆ ಮೆರೆಯಲು ಅಲ್ಲ. ಈ ಕುರಿತು ಓದುಗರ ಕ್ಷಮೆಯನ್ನೂ ಯಾಚಿಸಿ, ಮೋದಿಯವರು ನೀರಾವರಿಯಲ್ಲಿ ಕೈಗೊಂಡ ಇನ್ನಷ್ಟು ಮಹೋನ್ನತ ಕಾರ್ಯಗಳನ್ನು ವಿವರಿಸುತ್ತೇನೆ. ಸಾಧ್ಯವಾದರೆ ದಯವಿಟ್ಟು ನಿಮ್ಮ ಜಾತ್ಯತೀತತೆಯ ಮುಖವಾಡ ಕಳಚಿಟ್ಟು ಓದಿ ಅರ್ಥ ಮಾಡಿಕೊಳ್ಳಿ.
ದೇಶದಲ್ಲಿ ಇಂದಿಗೂ ಶೇ. ೫೦ರಷ್ಟು ಭೂಭಾಗಕ್ಕೆ ಅಂತರ್ಜಲ ಬಿಟ್ಟು ಅನ್ಯ ಆಸರೆಯಿಲ್ಲ. ಇದರ ನಡುವೆಯೇ ‘ನೀರು ಸರಬರಾಜು ಯೋಜನೆ’ಎಂಬ ಸರಕಾರಿ ಪ್ರಾಯೋಜಿತ ಕಾರ್ಯಕ್ರಮ ಎಗ್ಗಿಲ್ಲದೇ ಸಾಗಿದೆ. ಹಳ್ಳಿ ಹಳ್ಳಿಗಳಿಗೆ (ಕಾಗದದ ಮೇಲೆ) ಇವು ತಲುಪಿವೆ. ದುರಂತವೆಂದರೆ ಇಂಥ ಕಾರ್ಯಕ್ರಮಗಳು ಅನುಷ್ಠಾನಗೊಂಡಿರುವ ಸ್ಥಳಗಳ ನೀರಿಗಾಗಿನ ಹಾಹಾಕಾರ ಉಲ್ಬಣಿಸಿದೆ. ಗಮನಾರ್ಹ ಸಂಗತಿಯೆಂದರೆ, ಹೀಗೆ ‘ನೀರು ಸರಬರಾಜು’ ಇಲ್ಲದ ಹಳ್ಳಿಯ ಮೂಲೆಗಳಲ್ಲಿ, ಗುಡ್ಡಗಾಡುಗಳಲ್ಲಿ ಇಂದಿಗೂ ಜಲ ಸ್ವಾವಲಂಬನೆ ಅಸ್ತಿತ್ವದಲ್ಲಿದೆ. ಅದು ಕಾನೂನಾಗಲೀ, ಕಾರ್‍ಯಕ್ರಮವಾಗಿಯಾಗಲೀ ಹೇರಿಕೆಯಾಗಿಲ್ಲ. ಸಹಜ ಜೀವನವಾಗಿಯೇ ಸಾಗಿದೆ. ಆದ್ದರಿಂದ ನೀರಿನ ವಿಚಾರದಲ್ಲಿ ಸಂಕಷ್ಟವೆಂಬುದನ್ನು ಆ ಮಂದಿ ಅರಿತಿಲ್ಲ. ಅದನ್ನೇ ಮೋದಿಯವರು ಗುಜರಾತ್‌ನ ಎಲ್ಲ ಹಳ್ಳಿಗಳಿಗೆ ದಕ್ಕಿಸಿಕೊಟ್ಟಿದ್ದಾರೆ.
ನೀವು ನಂಬಬೇಕು. ಇಸ್ರೇಲ್ ಈ ವಿಚಾರದಲ್ಲಿ ಮಾದರಿ. ಅಂಥ ಮರುಭೂಮಿಯಲ್ಲೂ ಅತ್ಯಂತ ಸಮೃದ್ಧ ಬೆಳೆ ಬೆಳೆಯುತ್ತಿದ್ದಾರೆ. ದೇಶದ ಬಳಕೆ ಪೂರೈಸಿಕೊಂಡು ಒಂದಿಡೀ ಯುರೋಪಿಗೆ ಹಣ್ಣು ಹಂಪಲು, ತರಕಾರಿಗಳನ್ನು ರಫ್ತು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಅಂತರ್ಜಲ ಬಳಕೆಯ ಹತೋಟಿಯಿಂದ ಅಲ್ಲಿನ ನೀರಾವರಿ ಪ್ರದೇಶ ಒಂದಕ್ಕೆ ಎರಡರಷ್ಟು ಹೆಚ್ಚಿದೆ. ಮೋದಿ ಅದನ್ನೇ ಗುಜರಾತ್‌ನಲ್ಲೂ ಮಾಡುತ್ತಿರುವುದು, ಬೇಕಿದ್ದರೆ ಹೋಗಿ ನೋಡಿ ಬನ್ನಿ.

ಕರ್ನಾಟಕವನ್ನು ಗುಜರಾತ್ ಮಾಡುವುದಕ್ಕೆ ಮುಂಚೆ ಕೊಂಚ ಯೋಚಿಸೋಣ

ಗ ಎಲ್ಲ ರಾಜಕಾರಣಿಗಳ ಬಾಯಲ್ಲೂ ಅಭಿವೃದ್ಧಿಮಂತ್ರ ಪಠಣವಾಗುತ್ತಿದೆ. ಪ್ರಜಾಪ್ರಭುತ್ವ, ಜಾತ್ಯತೀತತೆ ಎಂಬೆಲ್ಲ ಮೌಲ್ಯಗಳನ್ನು ಮೂಲೆಗೆ ತಳ್ಳಲಾಗಿದೆ.
ಸದ್ಯಕ್ಕೆ ಕರ್ನಾಟಕದ ಬಿಜೆಪಿ ಸರಕಾರಕ್ಕೆ “ಅಭಿವೃದ್ಧಿ" ಎಂಬುದಕ್ಕೆ ನೈಜ ವ್ಯಾಖ್ಯಾನ ಕಟ್ಟಿಕೊಟ್ಟ ನರೇಂದ್ರ ಮೋದಿ ಎಂಬ ಚಲನಶೀಲ, ಚಿಂತಕ ಮುಖ್ಯಮಂತ್ರಿ (೧೬-೧೦-೦೯ರ ರಾಧಾಕೃಷ್ಣ ಭಡ್ತಿ ಅವರ ‘ಕರ್ನಾಟಕವನ್ನು ಇನ್ನೊಂದು ಗುಜರಾತು ಮಾಡಿ, ಪ್ಲೀಸ್’ ಲೇಖನ) ಅಭಿವೃದ್ಧಿಪಥದಲ್ಲಿ ದಾಪುಗಾಲಿಟ್ಟು ನಡೆಯುತ್ತಿರುವ ಆರಾಧ್ಯದೈವ ಎಂದೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯದ ಸಚಿವರು ಮೋದಿ ಅವರಿಂದ ‘ಶ್ರದ್ಧೆಯಿಂದ ಪಾಠ ಕೇಳಿ ಬಂದರು.’
ಒಂದು ರಾಜ್ಯವಾಗಲಿ, ಒಂದು ನಾಡಾಗಲಿ ಸರ್ವವಿಧದಲ್ಲಿಯೂ ಅಭಿವೃದ್ಧಿಗೊಳ್ಳಬೇಕು ಎಂಬುದರ ಬಗ್ಗೆ ಯಾರದೂ ತಕರಾರಿಲ್ಲ. ಆದರೆ ‘ಅಭಿವೃದ್ಧಿ’ ಶಬ್ದ ಬಳಸಿದಾಗ ಅದಕ್ಕೆ ನಾವು ಹಚ್ಚುವ ಅರ್ಥವೆಷ್ಟು? ಆ ಶಬ್ದಕ್ಕೆ ಇರುವ ವ್ಯಾಪ್ತಿಯೆಷ್ಟು? ಮತ್ತು ಅಭಿವೃದ್ಧಿಯೇ ಪ್ರಗತಿ ಕೂಡ ಹೌದೆ! ಈ ಎರಡು ಶಬ್ದಗಳ ಪರಸ್ಪರ ಸಂಬಂಧವೇನು? ಇವುಗಳನ್ನು ನಾವು ಎಚ್ಚರಿಕೆಯಿಂದ ತಿಳಿಯಬೇಕು ಮತ್ತು ಯಾವುದೇ ರೀತಿಯ ಒಳ್ಳೆಯ ಪಾಠವನ್ನಾಗಲಿ ನಾವು ಕಲಿಯುತ್ತಲೇ ಇರಬೇಕಾದ ಅವಶ್ಯಕತೆಯನ್ನು ಯಾರೂ ನಿರಾಕರಿಸಲಾರರು. ಆದರೆ ಯಾರಿಂದ ಪಾಠ ಕಲಿಯುತ್ತಿದ್ದೇವೆ ಮತ್ತು ಅವರದೇ ನಂಬಿಕೆಗಳನ್ನು ಕಾರ್ಯರೂಪಕ್ಕೆ ಅಳವಡಿಸುವಾಗ ಅವರು ತೋರುತ್ತಿರುವ ರೀತಿ ಯಾವುದು ಎಂಬುದು ಬಹುಮುಖ್ಯವಾಗುತ್ತದೆ. ವಿಶೇಷ ವಾಗಿ ಆ ವ್ಯಕ್ತಿ ರಾಜಕಾರಣದಲ್ಲಿದ್ದು, ರಾಜ್ಯದ ಆಡಳಿತದ ಮುಂಚೂಣಿ ಯಲ್ಲಿದ್ದಾಗ ಮತ್ತಷ್ಟು ಮಹತ್ವ ಪಡೆದುಕೊಳ್ಳುತ್ತದೆ.
ಈ ನಿಟ್ಟಿನಲ್ಲಿ, ಪ್ರಾಸಂಗಿಕವಾಗಿ, ಜಗತ್ತಿನ ಅತ್ಯಂತ ಅಭಿವೃದ್ಧಿ ಗೊಂಡ ರಾಷ್ಟ್ರಗಳತ್ತ ಒಂದು ಕ್ಷಣ ಗಮನಹರಿಸುವುದು ಅವಶ್ಯವೆನಿಸುತ್ತದೆ. ಮೊದಲ ಮಹಾಯುದ್ಧದಿಂದ ಜರ್ಝರಿತ ವಾಗಿಹೋಗಿದ್ದ ಜರ್ಮನಿ ರಾಷ್ಟ್ರವನ್ನು ಹಿಟ್ಲರ್ ಹನ್ನೆರಡೇ ವರ್ಷಗಳಲ್ಲಿ ನಾಗಾಲೋಟದ ವೇಗದಲ್ಲಿ ಅಭಿವೃದ್ಧಿಗೊಳಿಸಿ ಜಗತ್ತನ್ನೇ ಬೆದರಿಸುವಂಥ ಸ್ಥಿತಿಗೆ ಏರಿಸಿದ. ಅವನು ಸಾಸಿದ ಈ ಬಗೆಯ ‘ಅಭಿವೃದ್ಧಿ’ಯನ್ನು ಇಂದು ನಾವು ಮಾದರಿಯಾಗಿ ಒಪ್ಪಲು ಸಾಧ್ಯವೆ? ಸ್ಟಾಲಿನ್‌ನ ರಷ್ಯಾ ಅಥವಾ ಮಾವೋವಿನ ಚೀನಾದ ವಿಷಯಗಳಲ್ಲಿ ಆ ರಾಷ್ಟ್ರಗಳಲ್ಲಿ ನಡೆದ ನೈಜ ಘಟನೆಗಳಿಗೆ ಬಹು ಪ್ರeಪೂರ್ವಕವಾಗಿ ಕುರುಡಾದವರು ಮಾತ್ರ ಆ ಬಗೆಯ ಅಭಿವೃದ್ಧಿಯನ್ನು ಕೊಂಡಾಡಬಲ್ಲರು. ಈ ಮೂರೂ ರಾಷ್ಟ್ರಗಳಲ್ಲಿ ಲಕ್ಷಾಂತರ ಜನರ ಗೋರಿಗಳ ಮೇಲೆ ರಾಷ್ಟ್ರವನ್ನು ‘ಬಲಿಷ್ಠ’ಗೊಳಿಸಲಾಯಿತು. ಹೋಗಲಿ, ಪ್ರಜಾಪ್ರಭುತ್ವ ರಾಷ್ಟ್ರವೆಂದು ಬೀಗುವ, ಈಗಲಂತೂ ಏಕಮೇವಾದ್ವಿತೀಯ- ಚಿಂತಕ ನೋಮ್ ಚೋಮ್‌ಸ್ಕಿ ಹೇಳುವಂತೆ- ’Rogue State' ಆಗಿರುವ ಅಮೆರಿಕದ ಕತೆಯೇನು? ತನ್ನ ರಾಷ್ಟ್ರದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಭರಾಟೆಯಲ್ಲಿ ಅಮೆರಿಕ, ಮಿಕ್ಕೆಲ್ಲ ಚಿಕ್ಕ ದೊಡ್ಡ ರಾಷ್ಟ್ರಗಳ ರಾಜಕೀಯ, ಆರ್ಥಿಕ ಸ್ವಾತಂತ್ರ್ಯ ಗಳಿಕೆಯಲ್ಲಿ ಯತ್ನಗಳನ್ನೂ, ಹೋರಾಟಗಳನ್ನೂ ದಮನ ಮಾಡುವುದು ಅಥವಾ ಪ್ರಜಾಪ್ರಭುತ್ವ ತರುತ್ತೇನೆಂಬ ಅಪ್ಪಟ ಸುಳ್ಳಿನ ಮುಖವಾಡದಲ್ಲಿ ಲಕ್ಷಾಂತರ ಜನರನ್ನು ಸುಟ್ಟು ಬೂದಿ ಮಾಡುವುದು, ತನ್ಮೂಲಕ ನಿರಂತರ ಯುದ್ಧ ಸ್ಥಿತಿಯನ್ನು ನಿರ್ಮಾಣ ಮಾಡಿ ತನ್ನ ರಾಷ್ಟ್ರದ ಯುದ್ಧೋಪಕರಣ ಉತ್ಪಾದನಾ ಉದ್ಯಮವನ್ನು ಅಭಿವೃದ್ಧಿಗೊಳಿಸಿ, ತನ್ನ ಬೊಕ್ಕಸ ತುಂಬಿಸಿಕೊಳ್ಳುವುದು-ಇದೇ ಪರಿಪಾಠವನ್ನು ಅನುಸರಿಸುತ್ತಿದೆ. ಪ್ರಪ್ರಥಮ ಅಣುಬಾಂಬ್ ಸೋಟಿಸಿ ಕೋಟ್ಯಂತರ ಜನರನ್ನು ಆಹುತಿ ತೆಗೆದುಕೊಂಡು ಅಭಿವೃದ್ಧಿಶೀಲತೆಯ ಭಯಂಕರ ನಿಜಸ್ವರೂಪವನ್ನು ಅನಾವರಣಗೊಳಿಸಿದ್ದು ಅಮೆರಿಕ ರಾಷ್ಟ್ರವೇ.
ಅಭಿವೃದ್ಧಿ ಎಂಬುದು ಮಾನವೀಯ ಮೌಲ್ಯಗಳನ್ನು ಹೊಂದಿರದಿ ದ್ದರೆ ಅದು ಕೇವಲ ಇಂದ್ರಿಯಗಳಿಗೆ ಮಾತ್ರ ತಾಗುವಂತಾಗಿ, ಐಂದ್ರಿಕಭೋಗವೇ ಅಭಿವೃದ್ಧಿಯ ಲಕ್ಷಣ ಎಂಬ ಆತ್ಮಹಾನಿಕರ ಭ್ರಮೆಯನ್ನು ಹುಟ್ಟಿಸಿಬಿಡುತ್ತದೆ. ಈಗ ಜಗತ್ತಿನಾದ್ಯಂತ ಆಗುತ್ತಿರು ವುದೇ ಇದು. ಪ್ರಜಾತಂತ್ರದ, ಸಮಾನತೆಯ, ಸರ್ವಜನ ಹಿತದೃಷ್ಟಿಯ ವಿರೋ ನಿಲುವು ಇದು.
ನಮಗೆ ಅವಶ್ಯವಿರುವುದು ಸರ್ವಾಂಗೀಣ ಅಭಿವೃದ್ಧಿ. ಸರ್ವಾಂಗೀಣ ಅಭಿವೃದ್ಧಿಯೇ ಪ್ರಗತಿ. ಮನುಷ್ಯನ ಮನಸ್ಸನ್ನು ಮುಟ್ಟುವಂಥ, ಅರಳಿಸುವಂಥ, ಬೆಳೆಸುವಂಥ, ಮನುಷ್ಯ ಸಂಬಂಧ ಗಳನ್ನು ಆಪ್ತಗೊಳಿಸುವಂಥ, ಜೀವಪ್ರೇಮವನ್ನು ಹುಟ್ಟಿಸುವಂಥ ಅಭಿವೃದ್ಧಿಯೇ ಪ್ರಗತಿ.
* * *
ಈ ‘ಚಲನಶೀಲ ಚಿಂತಕ’ ಮೋದಿಯವರ ಅಭಿವೃದ್ಧಿ ರೀತಿಯನ್ನು ನೋಡೋಣ. ಗುಜರಾತೆಂದರೆ ಈಗ ಕನಿಷ್ಠ ಎರಡು ಗುಜರಾತ್‌ಗಳಿವೆ. ಒಂದು, ನಗರ ಕೇಂದ್ರಗಳಲ್ಲಿರುವ ಬಹುಸಂಖ್ಯಾತರ, ಹಣವಂತರ, ಉಚ್ಚವರ್ಗಗಳ ಗುಜರಾತ್. ಇನ್ನೊಂದು, ಗ್ರಾಮಾಂತರ ಪ್ರದೇಶಗಳ, ಬಹುಪ್ರಮುಖವಾಗಿ ಅಲ್ಪಸಂಖ್ಯಾತರ, ನಿರ್ಗತಿಕರ, ಆದಿವಾಸಿಗಳ ಗುಜರಾತ್.
ಗುಜರಾತಿನ ಕೆಲವು ಗ್ರಾಮಗಳ ಪ್ರವೇಶದಲ್ಲಿ ‘ಹಿಂದೂ ರಾಷ್ಟ್ರ ವಾದ ಗುಜರಾತಿನ ಹಿಂದೂ ಗ್ರಾಮಕ್ಕೆ ಸ್ವಾಗತ’ ಎಂಬ ಬೃಹತ್ ಬ್ಯಾನರ್‌ಗಳನ್ನು ಹಾಕಲಾಗಿದೆ.
ಒಂದು ಕಾಲದಲ್ಲಿ ಮೊಹರಂ ಹಬ್ಬದ ವೇಳೆ ಮೆರವಣಿಗೆಯಲ್ಲಿ ಕೊಂಡೊಯ್ಯುವ ತಾಬೂತ್ ಕೆಳಗೆ ಹಿಂದೂ ಮಹಿಳೆಯರು ತಮ್ಮ ಮಕ್ಕಳು ಹಾದುಹೋದರೆ ಅವರು ದೀರ್ಘಾಯುಷಿಗಳಾಗುತ್ತಾರೆ ಎಂಬ ನಂಬಿಕೆಯಲ್ಲಿ ಹಾಗೆ ಹಾದುಹೋಗಲು ಅವಕಾಶ ಪಡೆಯುತ್ತಿದ್ದರು. ಈಗ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುವಾಗ ತಮ್ಮ ಮಕ್ಕಳನ್ನು ಮುಸ್ಲಿಂ ಮಕ್ಕಳ ಪಕ್ಕದಲ್ಲಿ ಕೂಡಿಸಬಾರದು ಎಂಬ ಕಟ್ಟಪ್ಪಣೆ ಮಾಡುತ್ತಾರೆ.
ಮುಸ್ಲಿಂ ಯುವಕರಿಗೆ ಉದ್ಯೋಗ ನೀಡುವುದಿಲ್ಲ; ಅವರ ವ್ಯಾಪಾರ ಮಳಿಗೆಗಳಿಗೆ ಹೋಗುವುದಿಲ್ಲ; ಅವರ ಆಟೊಗಳಲ್ಲಿ ಕೂಡುವುದಿಲ್ಲ.
ಮುಸ್ಲಿಂ ಅಪ್ಪ ಅಮ್ಮಂದಿರು ಮಕ್ಕಳು ಅಕಸ್ಮಾತ್- ಮನೆಯಲ್ಲಿ ಎಷ್ಟೇ ಎಚ್ಚರಿಸಿದ್ದರೂ- ರಸ್ತೆಯಲ್ಲಿ ತಮ್ಮನ್ನು ‘ಅಮ್ಮಿ’ ‘ಅಬ್ಬ’ ಎಂದು ಕರೆದು ಎಲ್ಲಿ ತಮ್ಮ ಗುರುತು ಬಹಿರಂಗವಾಗಿಬಿಡುತ್ತದೋ ಎಂಬ ಆತಂಕದಲ್ಲಿ ಪ್ರತಿಕ್ಷಣ ಕಳೆಯುತ್ತಾರೆ.
೨೦೦೨ರಲ್ಲಿ ಆರಂಭವಾದ ಹತ್ಯಾಕಾಂಡದ ಮಿನಿಸ್ವರೂಪಗಳು ಈಗಲೂ ನಡೆಯುತ್ತಿವೆ. ೧,೭೦,೦೦೦ ನಿರಾಶ್ರಿತರ ಶಿಬಿರ ಗಳನ್ನು ಕಿತ್ತುಹಾಕಿರುವುದರಿಂದ, ಕೊಳಚೆ ಪ್ರದೇಶಗಳಲ್ಲಿ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಇಡೀ ಜನಾಂಗವನ್ನು ಎರಡನೆದರ್ಜೆ ನಾಗರಿಕರಾಗಿ ಕಾಣಬೇಕೆಂಬ ಅಘೋಷಿತ ಆದೇಶವಿದೆ.
ಈ ಎಲ್ಲದರಲ್ಲಿ ಗುಜರಾತಿನ ಪ್ರತಿ ಬಹುಸಂಖ್ಯಾತ ನಾಗರಿಕನೂ ಭಾಗವಹಿಸುತ್ತಿದ್ದಾನೆಂದಲ್ಲ. ಸಂಘಪರಿವಾರದ ಸ್ವಯಂಘೋಷಿತ ಧರ್ಮರಕ್ಷಕ ಪಡೆಯ ಗೂಢಚಾರರು ಪ್ರತಿಯೊಂದನ್ನೂ ಗಮನಿಸುತ್ತಿದ್ದಾರೆ. ಬಾಯಿಬಿಟ್ಟರೆ ಎಷ್ಟು ಅಪಾಯ ಎಂದು ಎಲ್ಲರಿಗೂ ತಿಳಿದಿದೆ. ತಮ್ಮ ಮನಸ್ಸಿಗೆ ಒಪ್ಪಿಗೆಯಾಗಿದ್ದನ್ನು ಸಂದರ್ಭದ ಒತ್ತಡಗಳಿಗೆ ಸಿಲುಕಿ ಹೇಗೆ ತಾವು ಮಾಡಲೇಬೇಕಾಗಿ ಬಂದಿದೆ ಎಂದು ಜನ ಗುಟ್ಟಾಗಿ, ಅನಾಮಿಕರಾಗಿ ಉಳಿದು ಹೇಳಿಕೊಳ್ಳುತ್ತಾರೆ.
ಇನ್ನು ‘ಚಲನಶೀಲ ಚಿಂತಕ’ ಮೋದಿಯವರೇ ಹೇಗೆ ನಡೆದು ಕೊಳ್ಳುತ್ತಿದ್ದಾರೆ! ಚುನಾವಣೆಗಳಲ್ಲಿ ‘ನಾವೈದು, ನಮಗಿಪ್ಪತ್ತೈದು’ ಎಂಬ ಘೋಷಣೆ ಜನಪ್ರಿಯಗೊಳಿಸಿದ್ದಾರೆ. ‘ನಿರಾಶ್ರಿತರ ಶಿಬಿರ ಗಳನ್ನು ತೆರೆದು ಅವುಗಳು ಶಿಶು ಉತ್ಪಾದನಾ ಕೇಂದ್ರಗಳನ್ನಾಗಿ ಮಾಡಬೇಕೆ?’ ಎಂದು ಸವಾಲು ಎಸೆಯುತ್ತಾರೆ. ಪೊಲೀಸರು ಮುಸ್ಲಿಮರ ಮನೆಬಾಗಿಲುಗಳನ್ನು ಮಧ್ಯರಾತ್ರಿ ಬಡಿದು ಯುವಕರನ್ನು ಎಳೆದೊಯ್ಯುವುದು, ಮಿಕ್ಕವರ ಮೇಲೆ ಹಲ್ಲೆ ನಡೆಸುವುದು ನಡೆದೇ ಇದೆ. ೨೦೦೨ರ ಹತ್ಯಾಕಾಂಡವಾದಾಗ ಪೊಲೀಸರ ಸಭೆ ಕರೆದು ‘ಮೂರು ದಿವಸ ನಿಷ್ಕ್ರಿಯರಾಗಿರಬೇಕೆಂದು’ ಆದೇಶ ನೀಡಿದುದು ಈಗ ಜಗತ್ತಿಗೇ ಗೊತ್ತಿರುವ ಸತ್ಯ.
ಇದು ಗುಜರಾತಿನ ಮತ್ತೊಂದು ಮತ್ತು ನಿಜ ಸ್ವರೂಪ. ಇದನ್ನು ನಿರ್ಲಕ್ಷಿಸಿ ಟಾಟಾಗಳು, ಅಂಬಾನಿಗಳು ಮೆಚ್ಚುವ ಗುಜರಾತ್. ಥಳಕಿನ ಗುಜರಾತ್, ತೋರಿಕೆಯ ಗುಜರಾತ್. ಇಂದ್ರಲೋಕವನ್ನೇ ಸೃಷ್ಟಿಸಿದರೂ ಅದು ಮನುಷ್ಯರು, ಸಾಮಾನ್ಯರು ನೆಮ್ಮದಿಯಿಂದ ಬದುಕಬೇಕಾದ ಲೋಕವಾಗಬೇಕೇ ಹೊರತು ಗರಿಗರಿ ಉಡುಪಿನ ಕಾರ್ಪೊರೇಟ್ ಜಗತ್ತಿನ ಬಕಾಸುರರಿಗಷ್ಟೇ ಅಲ್ಲ.
ಅಂಥ ಪ್ರಗತಿಯಾಗುವುದು ರಾತ್ರೋರಾತ್ರಿಯಾಗಲಿ, ಶೂನ್ಯದಲ್ಲಿಯಾಗಲಿ ಸಾಧ್ಯವಿಲ್ಲ. ಮನುಷ್ಯ ಸಂದರ್ಭದಲ್ಲಿ ನಿಧಾನಗತಿಯಲ್ಲಿ ಮಾತ್ರ ಸಾಧ್ಯ. ಸದ್ಯದ ನೆರೆಹಾವಳಿಯ ಸಂದರ್ಭದಲ್ಲಿ ಅಹೋರಾತ್ರಿ ಕಳಕಳಿಯಿಂದ ಮೆಚ್ಚುಗೆಯ ರೀತಿಯಲ್ಲಿ ಶ್ರಮಿಸುತ್ತಿರುವ ಯಡಿಯೂರಪ್ಪನವರಿಗೆ ಇದು ಸ್ವಂತ ಅನುಭವಕ್ಕೆ ಬಂದಿರಬೇಕು.
ತಂತ್ರeನ ಯುಗ ಕಲಿಸಿದ ವೇಗದ ಭ್ರಮೆಯನ್ನು ಮನುಷ್ಯನ ಮನಸ್ಸಿನ ಲೋಕಕ್ಕೆ ದಾಳಿಯಿಡಿಸಲು ಸಾಧ್ಯವಿಲ್ಲ ಎಂದೇ ಗಾಂಜಿಯವರು ‘One Step enough for me' ಎಂದು ಹೇಳುತ್ತಿದ್ದುದು. ಆದರೆ ಆ ’step’ ಒಂದೊಂದೇ ಆದರೂ ನಿಲ್ಲದಂತೆ ಇಡುತ್ತಲೇ ಇರಬೇಕು; ಮುಂದುವರಿಯುತ್ತಲೇ ಇರಬೇಕು, ಗಡಿಯಾರದ ಮುಳ್ಳಿನ ತರಹ; ಪ್ರಗತಿಯೂ ಸಾಧ್ಯವಾಗುವ ಅಭಿವೃದ್ಧಿಮಾರ್ಗ ಇದು.
ಆದರೆ ಗುಜರಾತಿನ ಸದ್ಯದ ಅಭಿವೃದ್ಧಿಗತಿ ನೋಡಿದರೆ ನನಗೆ ಒಮ್ಮಿಂದೊಮ್ಮೆಗೇ, ಈ ವೈeನಿಕ ಶರವೇಗದ ಯುಗದಲ್ಲೂ ಗರ್ಭಿಣಿ ದಿಢೀರ್ ಹೆರುವುದಿಲ್ಲವಲ್ಲ ಎಂಬ ಪರಿತಾಪದಲ್ಲಿ ಬಲವಂತದ ಹೆರಿಗೆ ಮಾಡಿಸುವ ರೀತಿಗೆ ಭಿನ್ನವಲ್ಲ. ಹೆಣ್ಣಿಗೆ ಆ ಒಂಬತ್ತು ತಿಂಗಳುಗಳೆಂದರೆ (ಐಟಿ,ಬಿಟಿ ಹೆಣ್ಣುಮಕ್ಕಳಿಗೂ ಸೇರಿದ ಹಾಗೆ) ಕನಸು, ಸಂಭ್ರಮ, ಆತಂಕ, ನಿರೀಕ್ಷೆ ಹಾಗೂ ಪ್ರಕೃತಿಯ ಅದ್ಭುತ ನಿಗೂಢ ಸೃಷ್ಟಿಕ್ರಿಯೆಯಲ್ಲಿ ಸ್ವಯಂ ಭಾಗವಹಿಸುತ್ತಿರುವ ಪುಳಕ- ಎಲ್ಲ ಸೇರಿರುತ್ತದೆ. ಅದು ಹೆಣ್ಣಿನ ವ್ಯಕ್ತಿತ್ವದ ಪ್ರಗತಿ, ಸರ್ವಾಂಗೀಣ ವಿಕಾಸ. ಇದೇ ಮನುಷ್ಯಲೋಕವನ್ನೂ ಒಳಗೊಳ್ಳುವುದು.
ಬದಲಾಗಿ ಭಡ್ತಿಯವರು ಹೇಳುವ ಹಾಗೆ ಮೋದಿಯವರ ಅಭಿವೃದ್ಧಿಪಾಠವನ್ನೇ ಕರಗತ ಮಾಡಿಕೊಂಡು ಕರ್ನಾಟಕವನ್ನು ಇನ್ನೊಂದು ಗುಜರಾತ್ ಮಾಡಿದರೆ, ಬಹುಶಃ ಅವರು ಹೇಳುವ ಹಾಗೆ ‘ಯಡಿಯೂರಪ್ಪನವರು ಕನಿಷ್ಠ ಇನ್ನೂ ಮೂರು ಅವಗೂ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಆ ದೇವರಿಂದಲೂ ಸಾಧ್ಯವಿಲ್ಲ’ ಎನ್ನುವುದಾದರೆ, ದೇವರೂ ಕೈಬಿಡುವುದು ಖಂಡಿತವಾದರೆ ಮನುಷ್ಯರು ತಮ್ಮ ಆತ್ಮಸ್ಥೈರ್ಯ, ಮನುಷ್ಯಪ್ರೀತಿ, ಭವಿಷ್ಯಪ್ರe ಇವುಗಳನ್ನು ನೆಚ್ಚಿ ಮುಂದುವರಿಯಬೇಕು ಅಷ್ಟೆ.
(ಗ್ರಂಥಋಣ: ಗುಜರಾತಿನ ನಿವೃತ್ತ ಡಿ.ಜಿ.ಪಿ. ಆರ್.ಬಿ. ಶ್ರೀಕುಮಾರ್ ಅವರ ‘ಧರ್ಮದ ಹೆಸರಿನಲ್ಲಿ’, ಹರ್ಷ ಮಂದೆರ್ ಅವರ ’'Fear & Forgiveness', ಸಿದ್ಧಾರ್ಥ್ ವರದರಾಜನ್ ಸಂಪಾದಿಸಿದ ಕೃತಿ ‘ಗುಜರಾತ್’, ಅರುಂಧತಿರಾಯ್ ಅವರ 'Listening to Grasshoppers' ಮತ್ತು ಶ್ರಮಿಕ್ ಪ್ರತಿಷ್ಠಾನದ ’Modi slapped’)
-ಜಿ.ಕೆ.ಗೋವಿಂದ ರಾವ್

ಕರ್ನಾಟಕವನ್ನು ಇನ್ನೊಂದು ಗುಜರಾತ್ ಮಾಡಿ, ಪ್ಲೀಸ್...

ಮೊನ್ನೆ ಮೊನ್ನೆಯಷ್ಟೇ ನಮ್ಮ ಆಡಳಿತಾರೂಢ ಬಿಜೆಪಿಯ ಎಲ್ಲ ನಾಯಕರೂ ಸುತ್ತೂರಿನಲ್ಲಿ ಹೋಗಿ ಕುಳಿತು ಚಿಂತನ ಮಂಥನ ನಡೆಸಿದ್ದು ಹಳೆಯ ಸುದ್ದಿ. ಸಂಪುಟದ ಅಷ್ಟೂ ಸದಸ್ಯರೂ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಅಲ್ಲಿ ಹೋಗಿ ಕುಳಿತು ಶ್ರದ್ಧೆಯಿಂದ ಪಾಠ ಕೇಳಿ ಬಂದರು. ಪಾಠ ಮಾಡಲು ಬಂದವರಾದರೂ ಎಂಥವರು ? ಈ ದೇಶದಲ್ಲಿ ಅಭಿವೃದ್ಧಿ ಎಂಬುದಕ್ಕೆ ನೈಜ ವ್ಯಾಖ್ಯಾನವನ್ನು ಕಟ್ಟಿಕೊಟ್ಟ ನರೇಂದ್ರ ಮೋದಿ ಎಂಬ ಚಲನಶೀಲ ಚಿಂತಕ.


ಪ್ರತಿಪಕ್ಷಗಳು ಎಂದಿನಂತೆಯೇ ಹುಯಿಲೆಬ್ಬಿಸಿದವು ಬಿಡಿ. ಅವತ್ತು ಬಿಜೆಪಿ ಸರಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಮೋದಿ ಬಂದಿದ್ದಾಗಲೇ ‘ರಾಜ್ಯವನ್ನು ಬಿಜೆಪಿಯವರು ಇನ್ನೊಂದು ಗುಜರಾತ್ ಮಾಡಲು ಹೊರಟಿದ್ದಾರೆ’ ಎಂದು ಅಲವತ್ತುಕೊಂಡವರು ಇವತ್ತು ಸುಮ್ಮನಿದ್ದಾರೆಯೇ ? ಅವರು ಯಾವ ಅರ್ಥದಲ್ಲಿ ಕರ್ನಾಟಕ ಇನ್ನೊಂದು ಗುಜರಾತ್ ಆಗುತ್ತದೆ ಎನ್ನುತ್ತಿದ್ದಾರೋ ಗೊತ್ತಿಲ್ಲ. ಆದರೆ ಒಂದೊಮ್ಮೆ ನಮ್ಮ ಸರಕಾರ ರಾಜ್ಯವನ್ನು ಇನ್ನೊಂದು ಗುಜರಾತ್ ಮಾಡಿದರೆ ಯಡಿಯೂರಪ್ಪ ಅವರು ಕನಿಷ್ಠ ಇನ್ನೂ ಮೂರು ಅವ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಆ ದೇವರಿಂದಲೂ ಸಾಧ್ಯವಿಲ್ಲ.



ಇನ್ನು ಬಿಜೆಪಿಯವರೂ ಅಷ್ಟೇ, ಅಕಾರಕ್ಕೆ ಬರುತ್ತಿದ್ದಂತೆಯೇ ಮೋದಿ ಮಾದರಿ ಎನ್ನಲು ಆರಂಭಿಸಿದ್ದರು. ಈಗಲೂ ಅದೇ ಜಪ ಮುಂದುವರಿಸಿದ್ದಾರೆ. ಮೋದಿ ಮಾದರಿ ಎಂದ ಮಾತ್ರಕ್ಕೆ ಅಥವಾ ಚಿಂತನ ಸಭೆಗೆ ಅವರನ್ನು ಕರೆಸಿ ಭಾಷಣ ಕೇಳಿಸಿಕೊಂಡ ಮಾತ್ರಕ್ಕೆ ಕರ್ನಾಟಕವನ್ನು ಗುಜರಾತ್ ಮಾಡಲು ದೇವರಾಣೆ ಸಾಧ್ಯವಿಲ್ಲ ಎಂಬುದು ಸದ್ಯದ ಸಂಪುಟದ ಕಾರ್ಯ ವೈಖರಿ ನೋಡಿದರೇ ಅರ್ಥ ಆಗುತ್ತದೆ. ಅಷ್ಟಕ್ಕೂ ಮೋದಿ ಮಾದರಿ ಅಂದರೇನು ? ಇನ್ನೊಂದು ಗುಜರಾತ್ ಆಗುವುದು ಹೇಗೆ ? ಎಂಬುದನ್ನು ಕೇಳಿ ನೋಡಿ, ಬಹುಶಃ ಆಡಳಿತಾರೂಢರಿಗೂ ಗೊತ್ತಿದ್ದಂತಿಲ್ಲ. ಪ್ರತಿಪಕ್ಷದವರಿಗೂ ತಿಳಿದಿಲ್ಲ. ಗೊತ್ತಾಗಲು ಅವರೊಮ್ಮೆ ಇಂದಿನ ಗುಜರಾತ್ ಅನ್ನು ಹೋಗಿ ನೋಡಿಕೊಂಡೇ ಬರಬೇಕು.



ಬಿಟ್ಹಾಕಿ, ಒಂದೊಮ್ಮೆ ಕರ್ನಾಟಕ ಇನ್ನೊಂದು ಗುಜರಾತ್ ಆದರೆ ನಮ್ಮ ಪಾಲಿಗೆ ಅದಕ್ಕಿಂತ ಪುಣ್ಯ ಮತ್ತೊಂದಿಲ್ಲ. ಏಕೆಂದರೆ ಈವರೆಗೆ ಕೇವಲ ಕೃಷಿ ಕ್ಷೇತ್ರವೊಂದರಲ್ಲೇ ಮೋದಿ ಮಾಡಿರುವ ಮೋಡಿ ನೋಡಿ ನಿಜಕ್ಕೂ ಬೆರಗು ಹುಟ್ಟುತ್ತದೆ. ದುರಂತವೆಂದರೆ ಮೋದಿ ಎಂದ ತಕ್ಷಣವೇ ಹಿಂದು-ಮುಸ್ಲಿಂ ಪ್ರಕರಣವನ್ನಷ್ಟೇ ನಮ್ಮ ಮಾಧ್ಯಮಗಳೂ ಬಿಂಬಿಸುತ್ತವೆ. ಹೆಚ್ಚೆಂದರೆ ಅಲ್ಲಿನ ಕೈಗಾರಿಕೆಗಳ ಬೆಳವಣಿಗೆಗಳ ಬಗೆಗೆ ಹೇಳಲಾಗುತ್ತದೆ. ಪ್ರಶ್ನೆ ಏನೆಂದರೆ ಅಭಿವೃದ್ಧಿ ಎಂದರೆ ಕೇವಲ ಕೈಗಾರಿಕೆಗಳೇ ? ಐಟಿ-ಬಿಟಿ ಕಂಪನಿಗಳಷ್ಟೇ ಅಭಿವೃದ್ಧಿಗೆ ಮಾನದಂಡವೇ ? ಈ ದೇಶದ ಜೀವಾಳವೆನಿಸಿರುವ ಕೃಷಿಯಲ್ಲಿ ಮೋದಿಯವರು ನಡೆಸಿರುವ ಕ್ರಾಂತಿ ಸುದ್ದಿಯಾಗುವುದೇ ಇಲ್ಲ ಏಕೆ ?



ಬಹುಶಃ ವಾಸ್ತವ ಗೊತ್ತಾದರೆ ನಮ್ಮ ರಾಜಕಾರಣಿಗಳು, ಮಾಧ್ಯಮಗಳು ಹೀಗೆ ವರ್ತಿಸಲು ಸಾಧ್ಯವೇ ಇಲ್ಲ. ಮೋದಿಯವರ ಯಶಸ್ಸಿನ ಗುಟ್ಟು ನಿಜವಾಗಿ ಅಡಗಿರುವುದೇ ಅವರು ಕೃಷಿ ಕ್ಷೇತ್ರದಲ್ಲಿ ಮಾಡಿದ ಕ್ರಾಂತಿಯಲ್ಲಿ. ೨೦೦೦ನೇ ಇಸವಿಯಿಂದ ಈವರೆಗೆ ಗುಜರಾತ್‌ನಲ್ಲಾಗಿರುವ ಕೃಷಿ ಬೆಳವಣಿಗೆ ದೇಶದಲ್ಲೇ ಒಂದು ಮಹತ್ವದ ಮೈಲುಗಲ್ಲು. ಆ ರಾಜ್ಯದಲ್ಲಿ ೨೦೦೦-೦೧ ಹಾಗೂ ೨೦೦೭-೦೮ ರ ನಡುವಿನ ಅವಯ ವಾರ್ಷಿಕ ಕೃಷಿ ಬೆಳವಣಿಗೆ ಶೇ ೯.೬ರಷ್ಟು. ಗಮನಾರ್ಹ ಸಂಗತಿಯೆಂದರೆ ಇದು ಒಟ್ಟಾರೆ ಇಡೀ ದೇಶದ ಕೃಷಿ ಬೆಳವಣಿಗೆಯ ಪ್ರಮಾಣಕ್ಕಿಂತ ದುಪ್ಪಟ್ಟು ಹೆಚ್ಚು. ಮಾತ್ರವಲ್ಲ, ಈವರೆಗೆ ನಾವೇನು ನಮ್ಮ ಮಹತ್ವದ ಸಾಧನೆ ಎಂದು ಪಂಜಾಬ್‌ನ ಹಸಿರು ಕ್ರಾಂತಿಯ ಬಗೆಗೆ ಬೆನ್ನು ತಟ್ಟಿಕೊಳ್ಳುತ್ತ ಬಂದಿದ್ದೆವಲ್ಲಾ, ಅದಕ್ಕಿಂತಲೂ ಮಿಗಿಲು. ಇನ್ನೂ ಮುಖ್ಯ ಸಂಗತಿಯೆಂದರೆ, ಈವರೆಗೆ ಕೃಷಿ ಕ್ಷೇತ್ರದ ಇತಿಹಾಸದಲ್ಲೇ ಜಗತ್ತಿನ ಯಾವ ಪ್ರದೇಶದಲ್ಲೂ ಇಂಥ ಬೆಳವಣಿಗೆ ದಾಖಲಾಗಿಲ್ಲ. ಸ್ವಾಮಿ, ಇಲ್ಲಿ ಕೇಳಿ. ಇಂಥ ಬೆಳವಣಿಗೆ ಸಾಧ್ಯವಾದದ್ದು ಯಾವುದೋ ಸಮೃದ್ಧ ನೀರಾವರಿ ಇರುವ ರಾಜ್ಯದಲ್ಲಿ ಅಲ್ಲ; ಸತತ ಬರಪೀಡಿತವೆಂಬ ಕುಖ್ಯಾತಿಗೆ ಪಾತ್ರವಾದ ಗುಜರಾತ್‌ನಲ್ಲಿ ಎಂಬುದನ್ನು ಮರೆಯಬೇಡಿ. ಅದರಲ್ಲೂ ಈ ಕ್ರಾಂತಿಗೆ ಮೋದಿಯವರು ಮುನ್ನುಡಿ ಬರೆದದ್ದೇ ೨೦೦೦ನೇ ಇಸವಿಯಲ್ಲಿ ಗುಜರಾತ್ ಅನ್ನು ಬಿಟ್ಟೂ ಬಿಡದೇ ಕಾಡಿದ ಬೀಕರ ಬರಗಾಲದಲ್ಲೇ ಎಂಬುದನ್ನು ಮರೆಯಬೇಡಿ.



ಎಲ್ಲ ಅಪಪ್ರಚಾರ, ಸೋ ಕಾಲ್ಡ್ ಮಾಧ್ಯಮಭೀರುಗಳ ‘ಸವಿಗನಸು’ಗಳ ನಡುವೆಯೂ ಮೋದಿ ಸರಕಾರ ಮತ್ತೆ ಮತ್ತೆ ಆರಿಸಿ ಬರುತ್ತಿದೆ. ಏಕೆಂದರೆ ಇಂದಿಗೂ ಗುಜರಾತ್ ನಿರ್ಣಾಯಕ ಮತದಾರರಿರುವುದು ಗ್ರಾಮೀಣ ಭಾಗದಲ್ಲೇ, ಅದರಲ್ಲೂ ಮುಖ್ಯವಾಗಿ ಕೃಷಿಕರು. ಅವರಿಗೆ ಏನು ಬೇಕೆಂಬುದು ಮೋದಿಯವರಿಗೆ ಗೊತ್ತು ಎಂಬುದು ಅವರ ಟೀಕಾಕಾರರಿಗೆ ಗೊತ್ತಿಲ್ಲ.



ಗುಜರಾತ್‌ನ ಶೇ. ೭೦ರಷ್ಟು ಪ್ರದೇಶ ಬರಪೀಡಿತ. ಬಹುತೇಕ ಜಿಲ್ಲೆಗಳು, ಒಂದೋ ಅದು ಒಣ ಪ್ರದೇಶವಾಗಿರುತ್ತದೆ, ಇಲ್ಲವೇ ಅರೆ ಒಣ ಪ್ರದೇಶವಾಗಿರುತ್ತದೆ. ಸಂಪೂರ್ಣ ನೀರಾವರಿ ಪ್ರದೇಶ ಎಂಬುದು ಅಲ್ಲಿ ತೀರಾ ವಿರಳ. ಇಲ್ಲವೇ ಇಲ್ಲ ಎಂದರೂ ತಪ್ಪಿಲ್ಲ. ಸರದಾರ್ ಸರೋವರ್ ಯೋಜನೆಯ ಬಗೆಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಮೋದಿ ವಿರೋಗಳು ಎಂದಿನಂತೆ ಅದನ್ನೂ ಬಿಡದೇ ಟೀಕಿಸಿದ್ದಾರೆ. ಆ ಯೋಜನೆ ಈವರೆಗೆ ಕೇವಲ ೦.೧ ಹೆಕ್ಟೇರ್ ಪ್ರದೇಶಕ್ಕೆ ಮಾತ್ರ ನೀರಾವರಿ ಒದಗಿಸಲು ಸಫಲವಾಗಿದೆ. ಆ ರಾಜ್ಯದ ಶೇ. ೮೨ರಷ್ಟು ಕೃಷಿ ನಿಂತಿರುವುದೇ ಬೋರ್‌ವೆಲ್‌ಗಳ ಮೇಲೆ. ೧೯೯೦ರ ಮಧ್ಯಭಾಗದಲ್ಲಿ ಅಂತರ್ಜಲ ಮಟ್ಟ ತೀರಾ ಅಪಾಯಕಾರಿ ಸನ್ನಿವೇಶವನ್ನು ತಲುಪಿತ್ತು. ಅಂಥ ಸಂದರ್ಭದಲ್ಲಿ ಅಲ್ಲಿ ಮಳೆ ಕೊಯ್ಲು ವಿಕೇಂದ್ರೀಕರಣದ ಸಾಹಸಕ್ಕೆ ಮುಂದಾಗಲಾಯಿತು. ಚೆಕ್ ಡ್ಯಾಮ್‌ಗಳು, ಗ್ರಾಮೀಣ ಕೆರೆಗಳ ಪುನರುತ್ಥಾನ ಹಾಗೂ ಬೋರಿ ಬಂಡ್( ಮರಳು ಚೀಲಗಳಿಂದ ಒಡ್ಡುಕಟ್ಟುವುದು)ಗಳ ನಿರ್ಮಾಣ ಗಣನೀಯವಾಗಿ ನಡೆಯಿತು. ೨೦೦೭ರ ಹೊತ್ತಿಗೆ ಇದು ತಾರಕಕ್ಕೇರಿತು. ಪ್ರತಿಪಕ್ಷ ಕಾಂಗ್ರೆಸ್ ಆ ಬಾರಿಯ ಚುನಾವಣೆಯಲ್ಲಿ ‘ಚೆಕ್ ದೆ ಗುಜರಾತ್’ ಘೋಷಣೆಯೊಂದಿಗೆ ಕಣಕ್ಕಿಳಿದರೆ ಮೋದಿ ‘ಚೆಕ್ ಡ್ಯಾಮ್ ಗುಜರಾತ್’ ಘೋಷಣೆ ಮೊಳಗಿಸಿದರು. ಅದೇ ಚೆಕ್ ಡ್ಯಾಮ್ ಮೋದಿಯವರನ್ನು ಮತ್ತೆ ಅಕಾರಕ್ಕೆ ತಂದಿತು.



ಒಂದು ಅಧ್ಯಯನದ ಪ್ರಕಾರ ೨೦೦೦ದಲ್ಲಿ ೧೦,೭೦೦ ಚೆಕ್‌ಡ್ಯಾಮ್‌ಗಳು ನಿರ್ಮಾಣವಾಗಿದ್ದವು. ಅದರಿಂದ ಬರ ಪೀಡಿತ ೩೨ ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿಯಾಗಿತ್ತು. ಆದರೆ, ನಂತರದ ವರ್ಷಗಳಲ್ಲಿ ಮೋದಿ ಆಡಳಿತದಲ್ಲಿ ಅದರ ಹತ್ತುಪಟ್ಟು ಹೆಚ್ಚು ಚೆಕ್‌ಡ್ಯಾಮ್‌ಗಳು ತಲೆ ಎತ್ತಿವೆ. ಸೌರಾಷ್ಟ್ರ ಮತ್ತು ಕುಛ್ ವಲಯದ ಕೃಷಿ ಬೆಳವಣಿಗೆಗೆ ಇದು ಮಹತ್ವದ ಕೊಡುಗೆಯನ್ನು ನೀಡಿದೆ. ಹೈನು ಉದ್ಯಮ ಬೆಳವಣಿಗೆಗೂ ಇದು ಕಾರಣವಾಯಿತು. ಹನಿ ನೀರಾವರಿಗೆ ಸಾಲ, ಸಹಾಯಧನ ಸೌಲಭ್ಯ ಹೆಚ್ಚಿಸಲಾಯಿತು. ಒಟ್ಟು ವೆಚ್ಚದ ಶೇ.೫ ರಷ್ಟನ್ನು ಮಾತ್ರ ರೈತರು ಪಾವತಿಸಿದರು. ಸರಕಾರಿ ಮಾಲೀಕತ್ವದ ಕಂಪನಿಗಳು ಶೇ.೫೦ ರಷ್ಟು ಹಣವನ್ನು ಸಬ್ಸಿಡಿ ರೂಪದಲ್ಲಿ ಪಾವತಿಸಿದವು. ಉಳಿದ ಮೊತ್ತಕ್ಕೆ ಸಾಲಸೌಲಭ್ಯ ಒದಗಿಸಲಾಯಿತು. ಹೀಗೆ ಒಂದು ಲಕ್ಷ ಎಕರೆಗೂ ಹೆಚ್ಚು ಜಮೀನು ನೀರಾವರಿ ಸೌಲಭ್ಯಕ್ಕೆ ಒಳಪಟ್ಟಿತು. ಹನಿ ನೀರಾವರಿಗೆ ಅತಿ ಹೆಚ್ಚು ಬಲವನ್ನು ತಂದು ಕೊಟ್ಟದ್ದು ಸರದಾರ್ ಸರೋವರ್ ಯೋಜನೆ.



ಗ್ರಾಮೀಣ ರಸ್ತೆಗಳ ಸುಧಾರಣೆ ಸಹ ಸಣ್ಣ ಸಂಗತಿಯೇನಲ್ಲ. ದೇಶದ ಅತ್ಯುತ್ತಮ ರಸ್ತೆ ಸಂಪರ್ಕ ಹೊಂದಿರುವ ಕೆಲವೇ ರಾಜ್ಯಗಳಲ್ಲಿ ಗುಜರಾತ್ ಸಹ ಒಂದು. ಶೇ.೯೮.೭ ಹಳ್ಳಿಗಳು ಪಕ್ಕಾ ರಸ್ತೆಗಳನ್ನು ಹೊಂದಿವೆ. ಇನ್ನು ಮೋದಿಯವರ ಜ್ಯೋತಿಗ್ರಾಮ ಯೋಜನೆ ನಿಜಕ್ಕೂ ದೇಶದ ಎಲ್ಲ ರಾಜ್ಯಗಳಿಗೂ ಮಾದರಿ. ಪಂಪ್ ಸೆಟ್ ಹಾಗೂ ಮನೆ ಬಳಕೆಗೆ ಪ್ರತ್ಯೇಕ ಫೀಡರ್ ಅನ್ನು ಈ ಯೋಜನೆಯಡಿ ಒದಗಿಸಲಾಗಿದೆ. ಇದರಿಂದ ಮನೆ ಬಳಕೆಗೆ ನಿರಂತರ ವಿದ್ಯುತ್ ಪೂರೈಕೆ ಹಾಗೂ ಕೃಷಿಗೆ ದಿನದ ಎಂಟು ಗಂಟೆ ಗುಣಮಟ್ಟದ ವಿದ್ಯುತ್ ಪೂರೈಕೆ ಸಾಧ್ಯವಾಗಿದೆ. ಕೃಷಿ ಮಾತ್ರವಲ್ಲ ಗ್ರಾಮೀಣಾಭಿವೃದ್ಧಿಯ ಸಾಧನೆಗೂ ಇದು ಪೂರಕವಾಗಿದೆ.



ಇನ್ನು ಕೃಷಿ ಉದ್ಯಮದ ಅಭಿವೃದ್ಧಿಯದು ಬೇರೆಯದೇ ಆದ ಅಧ್ಯಾಯ. ಸಂಶೋಧನೆಯ ಅನುಕೂಲಕ್ಕೆ ಗುಜರಾತ್ ಕೃಷಿ ವಿಶ್ವ ವಿದ್ಯಾಲಯವನ್ನು ನಾಲ್ಕು ಪ್ರತ್ಯೇಕ ವಿವಿಗಳನ್ನಾಗಿ ವಿಂಗಡಿಸಲಾಗಿದೆ. ಕೃಷಿ ಸಂಶೋದನೆಗಳು ರೈತರ ಹೊಲದಲ್ಲಿಯೇ ನಡೆಯುತ್ತವೆ. ಕೃಷಿ ತಾಂತ್ರಿಕತೆ ನೇರವಾಗಿ ರೈತರನ್ನು ತಲುಪುತ್ತಿವೆ. ಅಕಾರಿಗಳು ರೈತರು ಕೂರೆಂದರೆ ಕೂರುತ್ತಾರೆ, ನಿಲ್ಲೆಂದರೆ ನಿಲ್ಲುತ್ತಾರೆ. ನೈಜ ಅರ್ಥದಲ್ಲಿ ಗ್ರಾಮಗಳ, ರೈತರ ಸ್ವಾವಲಂಬನೆ ಜಾರಿಯಾಗಿದೆ. ರೈತ ಸಬಲೀಕರಣ ಎಂಬುದಕ್ಕೆ ಅಕ್ಷರಶಃ ಅರ್ಥ ಕಟ್ಟಿಕೊಟ್ಟಿದ್ದಾರೆ ಮೋದಿ. ಬೃಹತ್ ನೀರಾವರಿ ಯೋಜನೆಗಳಿಗಿಂತ ಪುಟ್ಟ ಪುಟ್ಟ ಉಪಕ್ರಮಗಳಿಗೆ ಆದ್ಯತೆ ನೀಡಲಾಗಿದೆ. ಈಗ ಹೇಳಿ ಕರ್ನಾಟಕ ಮತ್ತೊಂದು ಗುಜರಾತ್ ಆಗಬೇಕಿಲ್ಲವೇ ? ಯಾರು ಏನೇ ಬಡಬಡಿಸಲಿ. ಹಾಗೊಮ್ಮೆ ಮಾಡಿ ಪುಣ್ಯ ಕಟ್ಟಿಕೊಳ್ಳಿ ಯಡಿಯೂರಪ್ಪನವರೇ, ಪ್ಲೀಸ್ ! ಅದು ನಿಮ್ಮಿಂದ ಸಾಧ್ಯವೇ ?



‘ಲಾಸ್ಟ್’ಡ್ರಾಪ್: ನಮ್ಮ ಹಸಿರು ಕ್ರಾಂತಿ ಆಹಾರ ಸ್ವಾವಲಂಬನೆ ಎಂಬುದು ನಿಜವಾಗಿ ಅತಿ ದೊಡ್ಡ ಭ್ರಾಂತಿ. ಅದು ಅಸಲಿಗೆ ನಮ್ಮ ಕೃಷಿ ವೈವಿಧ್ಯದ ಅಪಹರಣಕ್ಕೆ ಅಮೆರಿಕ ವಿಶ್ವಮಟ್ಟದಲ್ಲಿ ಹೂಡಿದ್ದ ಹುನ್ನಾರ. ಅದಕ್ಕೆ ನಾವು ಯಶಸ್ವಿಯಾಗಿ ಬಲಿಯಾಗಿದ್ದೇವೆ.